ಉಡುಪಿ:ವಿರೋಧ ಪಕ್ಷಗಳು ನೆರೆ ಪರಿಹಾರ ವಿಚಾರದಲ್ಲಿ ರಾಜಕಾರಣ ಮಾಡುತ್ತಿವೆ. ಕೇಂದ್ರ ಸರ್ಕಾರ ಒಂದು ರಾಜ್ಯಕ್ಕೆ ಪರಿಹಾರ ಕೊಟ್ಟು ಮತ್ತೊಂದು ರಾಜ್ಯಕ್ಕೆ ಕೊಡದಿದ್ದರೆ ರಾಜ್ಯದ ಸಂಸದರೆಲ್ಲ ಖಂಡಿತ ಧನಿ ಎತ್ತುತ್ತೇವೆ ಎಂದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ನೆರೆ ಪರಿಹಾರ ವಿತರಣೆಯಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಿಲ್ಲ. ಒಂದೂ ಸೀಟು ಗೆಲ್ಲದ ಕೇರಳ ಹಾಗೂ 25 ಸೀಟು ಗೆದ್ದ ಕರ್ನಾಟಕವನ್ನು ಸಮಾನವಾಗಿ ನೋಡುತ್ತಿದೆ. ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ. ಅನ್ಯಾಯವಾದರೆ ಮುಖ್ಯಮಂತ್ರಿಗಳು ಹಾಗೂ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇವೆ ಎಂದರು.
ಈಗಾಗಲೇ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ನೀಡುತ್ತಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹ 2,500 ಕೋಟಿ ಹಣವಿದೆ. ಶಾಶ್ವತ ಕಾಮಗಾರಿಗಳಿಗೆ ಮಾತ್ರ ಕೇಂದ್ರದಿಂದ ಅನುದಾನ ಬೇರಬೇಕಿದೆ ಎಂದು ತಿಳಿಸಿದರು.
10 ರಾಜ್ಯಗಳು ಅತಿವೃಷ್ಟಿಗೆ ಒಳಗಾಗಿದ್ದು, ಕೇಂದ್ರದಿಂಧ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. ಎನ್ಡಿಆರ್ಎಫ್ ನಿಯಮಗಳ ಪ್ರಕಾರ ನೆರೆ ಸಂತ್ರಸ್ತರ ಮಾಹಿತಿಯನ್ನು ರಾಜ್ಯ ಸರ್ಕಾರ ಕೊಟ್ಟರೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪರಿಹಾರ ಜಮೆಯಾಗಲಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.
ಭೈರಪ್ಪ ಕೋಟಿ ಪಾಲು ಮೇಲು ಉಡುಪಿ: ನಾಡಹಬ್ಬ ದಸರಾಗೆ ಬಂದು ನಾಡದೇವಿಗೆ ಕೈಮುಗಿಯದ ನಾಸ್ತಿಕವಾದಿಗಳಿಗಿಂತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಕೋಟಿ ಪಾಲು ಮೇಲು. ನಾಸ್ತಿಕರನ್ನು ನಾಡಹಬ್ಬಕ್ಕೆ ಕರೆದು ಅಪಮಾನ ಮಾಡುವ ಕೆಲಸವನ್ನು ಹಿಂದಿನ ಸರ್ಕಾರ ಮಾಡಿತ್ತು. ಈಗ ಆಸ್ತಿಕರನ್ನು ಕರೆದು ಗೌರವಿಸುತ್ತಿದ್ದೇವೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.