ಕುಂದಾಪುರ: ಸಮೀಪದ ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಈಚೆಗೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಎಸ್.ರತ್ನಾಕರ ಅವರು ಸಂಘಕ್ಕೆ ₹ 2,36,176.70 ನಿವ್ವಳ ಲಾಭ ಬಂದಿದೆ ಎಂದರು. ಹಾಲು ಉತ್ಪಾದಕ ಸದಸ್ಯರಿಗೆ ಶೇಕಡಾ 65 ಬೋನಸ್ ಹಾಗೂ ಶೇಕಡಾ 20 ಡಿವಿಡೆಂಡ್ ನೀಡಲಾಗುವುದೆಂದು ತಿಳಿಸಿದರು. ಕಾರ್ಯದರ್ಶಿ ದೇವೇಂದ್ರ ಎನ್.ಉಗ್ರಾಣಿ, ಸಂಘದ ವರದಿ ಮಂಡಿಸಿದರು. ನಿರ್ದೇಶಕ ಎಸ್. ಜನಾರ್ದನ ಸ್ವಾಗತಿಸಿದರು. ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಮಾಧವ ಐತಾಳ್ ಅವರು ಪಶು ಆಹಾರ ಬಳಕೆ, ರಾಸುಗಳ ನಿರ್ವಹಣೆ ಮತ್ತು ಹಸುವಿನ ವಿಮೆ, ಖನಿಜ ಮಿಶ್ರಣ ಬಗ್ಗೆ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಉಮೇಶ ಕುಂದರ್ ಹಾಲಿನ ಗುಣಮಟ್ಟ, ಶುದ್ಧ ಹಾಲು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು.