ಉಡುಪಿ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ರಾಜ್ಯದಾದ್ಯಂತ ಬಾರ್ ಅಂಡ್ ರೆಸ್ಟೋರೆಂಟ್ಗಳು ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಶನಿವಾರವೇ ಮದ್ಯಖರೀದಿಗೆ ಮುಗಿಬಿದ್ದಿದ್ದ ದೃಶ್ಯ ಉಡುಪಿ ನಗರದ ಹಲವೆಡೆ ಕಂಡುಬಂತು.
ನಗರದ ಬಹುತೇಕ ಬಾರ್ಗಳ ಮುಂದೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ದಟ್ಟಣೆ ಹೆಚ್ಚಾಗಿದ್ದರಿಂದ ಗ್ರಾಹಕರು ಸಾಲಿನಲ್ಲಿ ನಿಂತು ಮದ್ಯವನ್ನು ಖರೀದಿಸಿದರು. ಕೆಲವು ಬಾರ್ಗಳಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಎಂಆರ್ಪಿ ಮಳಿಗೆಯಲ್ಲಿ ದಟ್ಟಣೆ ಹೆಚ್ಚಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂ ಕರೆ ನೀಡಿದ್ದು, ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಮನೆಯಿಂದ ಹೊರಬಾರದಂತೆ ಸಲಹೆ ನೀಡಿದ್ದಾರೆ.ಮನೆಯಲ್ಲಿ ದಿನವಿಡೀ ಸಮಯ ಕಳೆಯುವುದು ಕಷ್ಟ. ಬೇಜಾರು ಕಳೆಯಲು ಮದ್ಯ ಖರೀದಿಸುತ್ತಿರುವುದಾಗಿ ಗ್ರಾಹಕರೊಬ್ಬರು ಹೇಳಿದರು.
ಸರ್ಕಾರ ಅನಿರ್ಧಿಷ್ಟಾವಧಿಗೆ ಬಾರ್ಗಳನ್ನು ಮುಚ್ಚಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರಿಂದ 15 ದಿನಕ್ಕಾಗುವಷ್ಟು ಮದ್ಯ ಖರೀದಿಸಿದ್ದೇನೆ ಎಂದು ಮತ್ತೊಬ್ಬರು ಹೇಳಿದರು.
ಕಾರಿನ ಡಿಕ್ಕಿ, ಸ್ಕೂಟರ್ ಸೀಟಿನ ಕೆಳಗಡೆ ಹಾಗೂ ದಿನಸಿ ಸಾಮಾನು ಕೊಂಡೊಯ್ಯುವ ಬ್ಯಾಗ್ಗಳಲ್ಲಿ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ದೃಶ್ಯ ಬಹುತೇಕ ಬಾರ್ಗಳ ಮುಂದೆ ಕಂಡುಬಂತು.