ಉಡುಪಿ: ಈಚೆಗೆ ಸುರಿದ ಭಾರಿ ಮಳೆಗೆ ಹೆಬ್ರಿ ತಾಲ್ಲೂಕು ಮಡಾಮಕ್ಕಿ ಸಮೀಪ ಜರಿದಿರುವ ಕೋಟೆರಾಯನ ಬೆಟ್ಟಕ್ಕೆ ಬುಧವಾರ ಕುಂದಾಪುರ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರನ್ನೊಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಬೆಟ್ಟ ಜರಿದಿರುವ ಪ್ರದೇಶದಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಮನೆಗಳಿಲ್ಲ. ಮೀಸಲು ಅರಣ್ಯವಾದ ಕಾರಣ ಕೃಷಿ ಚಟುವಟಿಕೆಗಳೂ ಇಲ್ಲ. ಗುಡ್ಡಕುಸಿತದಿಂದ ಜನವಸತಿ ಪ್ರದೇಶಕ್ಕೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ ಎಂದು ಕುಂದಾಪುರ ಉಪ ವಿಭಾಗಾಧಿಕಾರಿ ಕೆ.ರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಬೆಟ್ಟದ ಬುಡದಲ್ಲಿರುವ ಮನ್ನಾಡಿ ಗ್ರಾಮಕ್ಕೂ ಭೇಟಿನೀಡಿ ಜನರ ಅಭಿಪ್ರಾಯ ಹಾಗೂ ಅಹವಾಲು ಆಲಿಸಲಾಗಿದೆ. ಮಂಗಳವಾರ ವನ್ಯಜೀವಿ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿದ್ದಾರೆ. ಭೂಗರ್ಭ ಇಲಾಖೆಯ ಅಧಿಕಾರಿಗಳಿಗೂ ಸ್ಥಳಕ್ಕೆ ತೆರಳಿ ವಸ್ತುಸ್ಥಿತಿ ಅಧ್ಯಯನಮಾಡಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಎಸಿ ತಿಳಿಸಿದರು.
ಮಳೆ ಕ್ಷೀಣ:ಜಿಲ್ಲೆಯಲ್ಲಿ ಬುಧವಾರ ಸಾಧಾರಣ ಪ್ರಮಾಣದ ಮಳೆಯಾಗಿದ್ದು, ಬೈಂದೂರು ತಾಲ್ಲೂಕಿನ ಕಾಲ್ತೋಡಿನಲ್ಲಿ ಗರಿಷ್ಠ 7.8 ಸೆಂ.ಮೀ, ಕುಂದಾಪುರದ ಕಿರಿಮಂಜೇಶ್ವರದಲ್ಲಿ 7.5 ಸೆಂ.ಮೀ ಮಳ ಬಿದ್ದಿದೆ.