ಉಡುಪಿ: ನಗರದ ಮಹಿಳಾ ಹೈಟೆಕ್ ಮೀನುಮಾರುಕಟ್ಟೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನಗರಸಭೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮೀನುಗಾರ ಮಹಿಳೆಯರಿಂದ ಮನವಿಯನ್ನು ಸ್ವೀಕರಿಸಿದರು.
ಮೀನು ಮಾರುಕಟ್ಟೆಯಲ್ಲಿ ಹೋಲ್ಸೇಲ್ ಮೀನು ವ್ಯಾಪಾರ ಮಾಡುವ ಸ್ಥಳದಲ್ಲಿ ಗೋಡೆ ಬಿರುಕುಬಿಟ್ಟಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ಪ್ರಾಂಗಣದಲ್ಲಿ ನೀರು ನಿಲುಗಡೆಯಾಗುತ್ತಿದೆ, ಶೌಚಾಲಯ ನಿರ್ವಹಣೆ ಕೊರತೆ ಹಾಗೂ ಶೌಚ ಗುಂಡಿ ವಿಸ್ತಾರಗೊಳಿಸಬೇಕು, ಮೀನುಕಟ್ಟಿಂಗ್ ಪ್ರಾಂಗಣವನ್ನು ಮಹಿಳೆಯರಿಗೆ ಅನುಕೂಲವಾಗುವಂತೆ ಸಮತಟ್ಟುಗೊಳಿಸಬೇಕು, ನಗರಸಭೆಯಿಂದ ನೀರಿನ ಸಂಪರ್ಕ ಕಲ್ಪಿಸಬೇಕು, ಮಾರುಕಟ್ಟೆಯ ಮುಂಭಾಗದ ಬಾವಿಗೆ ಆವರಣ ಗೋಡೆ ನಿರ್ಮಾಣ ಮಾಡಬೇಕು, ಮಹಿಳೆಯರ ಕೊಠಡಿ, ವಿಶ್ರಾಂತಿ ಕೊಠಡಿ, ಮೇಲ್ಮಹಡಿಯಲ್ಲಿ ಶೌಚಾಲಯ ನಿರ್ಮಾಣ, ಜನರೇಟರ್ ಮತ್ತು ಸಿಸಿ ಟಿವಿ ಕ್ಯಾಮೆರಾ ಸೌಲಭ್ಯ, ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡುವಂತೆ ಮೀನು ಮಾರಾಟ ಮಾಡುವ ಮಹಿಳೆಯರು ಬೇಡಿಕೆ ಸಲ್ಲಿಸಿದರು.
ಉಡುಪಿ ತಾಲೂಕು ಮಹಿಳಾ ಹಸಿ ಮೀನುಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್.ಸಾಲ್ಯಾನ್ ಅವರು ಶಾಸಕ ಯಶ್ಪಾಲ್ ಅವರನ್ನು ಮಹಿಳಾ ಮೀನುಗಾರರ ಪರವಾಗಿ ಅಭಿನಂದಿಸಿದರು. ಬಳಿಕ ಮಾತನಾಡಿ, ಶಾಸಕ ಯಶ್ಪಾಲ್ ಸುವರ್ಣ ಮೀನುಗಾರ ಮಹಿಳೆಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ, ಮೀನುಗಾರಿಕಾ ಫೆಡರೇಶನ್, ಮಹಾಲಕ್ಷ್ಮೀ ಬ್ಯಾಂಕ್ ಅಭಿವೃದ್ಧಿಯ ನೇತೃತ್ವವಹಿಸಿದ್ದು ಉಡುಪಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿ ನಗರದ ಮಹಿಳಾ ಹೈಟೆಕ್ ಮೀನುಮಾರುಕಟ್ಟೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಶೀಘ್ರ ಒದಗಿಸಲಾಗುವುದು, ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಶುದ್ಧ ಕುಡಿಯುವ ನೀರಿನ ಘಟಕ, ಪ್ರಥಮ ಚಿಕಿತ್ಸೆ ಘಟಕವನ್ನು ಶೀಘ್ರವಾಗಿ ಸ್ಥಾಪಿಸಲಾಗುವುದು ಎಂದರು.
ಈ ಸಂದರ್ಭ ನಗರಸಭಾ ಸದಸ್ಯೆ ಮಾನಸ ಸಿ. ಪೈ, ನಗರಸಭೆ ಪೌರಾಯುಕ್ತರಾದ ರಮೇಶ್ ಪಿ. ನಾಯಕ್, ಎಇಇ ಯಶವಂತ ಪ್ರಭು, ಉಡುಪಿ ತಾಲ್ಲೂಕು ಮಹಿಳಾ ಹಸಿ ಮೀನುಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಆನಂದ್, ಜಯಂತಿ ಗುರುದಾಸ್ ಬಂಗೇರ, ಲೀಲಾ ಕುಂದರ್, ಸುಂದರಿ ಸಾಲ್ಯಾನ್, ವನಜ ಸಾಲ್ಯಾನ್, ಮಾಲತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.