ಉಡುಪಿ: ಅಪಘಾತದಲ್ಲಿ ಕಾಲಿಗೆ ಗಂಭೀರವಾಗಿ ಗಾಯಗೊಂಡು ಹೊಸಬೆಳಕು ಆಶ್ರಮದಲ್ಲಿದ್ದ ಹಸುವಿಗೆ ಬುಧವಾರ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಹೊಸಬೆಳಕು ಸೇವಾ ಟ್ರಸ್ಟ್ ಸದಸ್ಯರು ಸೀಮಂತ ಕಾರ್ಯ ನೆರವೇರಿಸಿದರು.
ಗೌರಿ ಹೆಸರಿನ ಹಸುವಿನ ಮೈತೊಳೆದು ಹಸಿರು ಸೀರೆ ಉಡಿಸಿ ಅಲಂಕಾರ ಮಾಡಿ ಸೀಮಂತ ಮಂಟಪಕ್ಕೆ ಕರೆತರಲಾಯಿತು. ಮಹಿಳೆಯರು ರವಿಕೆ ಕಣ, ಅಕ್ಕಿ, ತೆಂಗಿನಕಾಯಿ ಸಹಿತ ಹಲವು ಸಾಮಾಗ್ರಿಗಳೊಂದಿಗೆ ಮಡಿಲು ತುಂಬಿಸುವ ಶಾಸ್ತ್ರ ನೆರವೇರಿಸಿದರು. ಮೊಳಕೆ ನವ ಧಾನ್ಯಗಳು, ಹಿಂಡಿಯನ್ನು ಹಸುವಿಗೆ ನೀಡಲಾಯಿತು. ಮಹಿಳೆಯರು ಹಸುವಿಗೆ ಆರತಿ ಬೆಳಗಿ ಸಂಭ್ರಮಿಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ 20 ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಹಸುವಿನ ಕಾಲಿಗೆ ಗಂಭೀರ ಗಾಯವಾಗಿತ್ತು. ಹಸುವಿನ ವಾರಸುದಾರರು ಕರೆದೊಯ್ಯಲು ಬಾರದಿದ್ದಾಗ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಹಸುವನ್ನು ಕರೆತಂದು ಹೊಸ ಬೆಳಕು ಆಶ್ರಮದಲ್ಲಿ ಬಿಟ್ಟಿದ್ದರು. ಆಶ್ರಮ ಸಂಚಾಲಕ ವಿನಯಚಂದ್ರ ಚಿಕಿತ್ಸೆ ಕೊಡಿಸಿದ್ದರು.
ಸೀಮಂತ ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ.ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು, ಹೊಸಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್, ವಿನಯಚಂದ್ರ ಆಚಾರ್ಯ, ಶ್ರೀಧರ್ ಭಟ್ ಇದ್ದರು.