ಉಡುಪಿ: ಕೋವಿಡ್ನಿಂದಾಗಿ ಕಲಿಕೆಗೆ ಗ್ರಾಮೀಣ ಭಾಗದ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ತಾರತಮ್ಯವಾಗುವ ವಿದ್ಯಾರ್ಥಿಗಳಿಗೆ ‘ಸಾಂಕ್ರಮಿಕ ರೋಗ ಕಾಲದ ವಿಶೇಷ ಪ್ರೋತ್ಸಾಹಾಂಕ’ ನೀಡಬೇಕು ಎಂದು ದಸಂಸ ಒಕ್ಕೂಟದಿಂದ ಮಂಗಳವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸಿಬಿಎಸ್ಸಿ ಪರೀಕ್ಷೆಗಳನ್ನು ರದ್ದು ಮಾಡಿದರೂ ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಹಠಕ್ಕೆ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಅನ್ಯಾಯ ಸರಿಪಡಿಸಬೇಕು ಎಂದು ಸಂಘಟನೆಯ ಮುಖಂಡ ಸುಂದರ್ ಮಾಸ್ತರ್ ಒತ್ತಾಯಿಸಿದರು.
ಕೋವಿಡ್ನಿಂದ 2 ವರ್ಷ ಶೂನ್ಯ ಕಲಿಕಾ ವರ್ಷಗಳಾಗಿದ್ದು, ಆನ್ಲೈನ್ ಶಿಕ್ಷಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ತಲುಪಿಲ್ಲ. ಸ್ಮಾರ್ಟ್ ಫೋನ್ ಇಲ್ಲದ ನಗರದ ಬಡ ವಿದ್ಯಾರ್ಥಿಗಳಿಗೂ ಆನ್ಲೈನ್ ಶಿಕ್ಷಣ ಕೈಗೆಟುಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ್ದು, ಶ್ರೀಮಂತ ಹಾಗೂ ಬಡ ವಿದ್ಯಾರ್ಥಿಗಳ ಮಧ್ಯೆ ಅಂಕ ಗಳಿಕೆಯಲ್ಲಿ ಕಂದಕ ಸೃಷ್ಟಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂತ್ರಸ್ತ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬಂದರೆ 8 ಅಥವಾ 9ನೇ ತರಗತಿಯ ಸಾಧನೆಯನ್ನು ಆಧರಿಸಿ ಅಂಕಗಳನ್ನು ನೀಡಬೇಕು. ಕಲಿಕೆ ಸಾಧ್ಯವಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಂಕ್ರಮಿಕ ಕಾಲದ ವಿಶೇಷ ಪ್ರೋತ್ಸಾಹಾಂಕ ನೀಡಬೇಕು. ಬಡ, ದಲಿತ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಆದ್ಯತಾ ಪ್ರವೇಶ ವ್ಯವಸ್ಥೆ ನೀಡಬೇಕು ಎಂದು ಸುಂದರ್ ಮಾಸ್ತರ್ ಒತ್ತಾಯಿಸಿದರು.
ಎಸ್ಸೆಸ್ಸೆಲ್ಸಿ ನಂತರದ ಶಿಷ್ಯವೇತನ, ಪ್ರೋತ್ಸಾಹಧನ ವಿತರಣೆಯಲ್ಲೂ ಆದ್ಯತೆ ನೀಡಬೇಕು. ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಉದ್ಯೋಗ ನೀಡುವಾಗಲೂ ವಿಶೇಷ ಪ್ರೋತ್ಸಾಹಾಂಕ ಪರಿಗಣನೆಯ ಬಗ್ಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.