ಉಡುಪಿ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕ್ಷೀಣವಾಗಿದ್ದರೂ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿಲ್ಲ. ಸರಾಸರಿ ಪ್ರತಿದಿನ 100ರ ಆಸುಪಾಸಿನಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇತೆರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಸೋಂಕಿನ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ.
ಗುರುವಾರ ಜಿಲ್ಲೆಯಲ್ಲಿ 110 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, ಸೋಂಕಿತರಲ್ಲಿ 47 ಪುರುಷರು ಹಾಗೂ 65 ಮಹಿಳೆಯರು ಇದ್ದಾರೆ. 57 ಸೋಂಕಿತರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡರೆ 53 ಜನರಲ್ಲಿ ಲಕ್ಷಣಗಳು ಪತ್ತೆಯಾಗಿಲ್ಲ. 110 ಸೋಂಕಿತರಲ್ಲಿ ಉಡುಪಿ ತಾಲ್ಲೂಕಿನ 41, ಕುಂದಾಪುರ ತಾಲ್ಲೂಕಿನ 36 ಹಾಗೂ ಕಾರ್ಕಳ ತಾಲ್ಲೂಕಿನ 33 ಮಂದಿ ಇದ್ದಾರೆ. 17 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 93 ಮಂದಿ ಹೋಂ ಐಸೊಲೇಷನ್ನಲ್ಲಿದ್ದಾರೆ.
ಸೋಂಕಿತರ ಪತ್ತೆ ಕಾರ್ಯವನ್ನು ಚುರುಕುಗೊಳಿಸಿರುವ ಆರೋಗ್ಯ ಇಲಾಖೆ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಿದೆ. ಗುರುವಾರದ 3,593 ಕೋವಿಡ್ ಪರೀಕ್ಷೆಗಳ ಪೈಕಿ 110 ಪಾಸಿಟಿವ್, 3,483 ನೆಗೆಟಿವ್ ವರದಿ ಬಂದಿವೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 3ರ ಆಸುಪಾಸಿನಲ್ಲಿದೆ. ಇದುವರೆಗೂ 7,25,834 ಮಂದಿಗೆ ಕೋವಿಡ್ ಪರೀಕ್ಷೆ ನೆಡಸಲಾಗಿದ್ದು, 67,999 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಗುರುವಾರ 97 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 66,652 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ. ಸದ್ಯ 944 ಸಕ್ರಿಯ ಸೋಂಕಿತ ಪ್ರಕರಣಗಳು ಮಾತ್ರ ಇವೆ.
ಕೋವಿಡ್ ಮರಣ ಪ್ರಮಾಣವೂ ತಗ್ಗಿದ್ದು, ಗುರುವಾರ ಕುಂದಾಪುರ ತಾಲ್ಲೂಕಿನಲ್ಲಿ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ 80 ವರ್ಷದ ಕೊರೊನಾ ಸೋಂಕಿತ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 403ಕ್ಕೆ ಹೆಚ್ಚಾಗಿದೆ. ಮೊದಲ ಅಲೆಯಲ್ಲಿ 190 ಮಂದಿ ಮೃತಪಟ್ಟಿದ್ದರೆ, 2ನೇ ಅಲೆಯಲ್ಲಿ ಇಲ್ಲಿಯವರೆಗೂ 213 ಮಂದಿ ಮೃತಪಟ್ಟಿದ್ದಾರೆ.
ಲಸಿಕೆ ವಿವರ:
18 ರಿಂದ 44 ವರ್ಷದೊಳಗಿನ 1,37,576 ಮಂದಿಗೆ ಕೋವಿಡ್ ಮೊದಲ ಡೋಸ್, 2036 ಮಂದಿಗೆ ಎರಡನೆ ಡೋಸ್ ಲಸಿಕೆ ಹಾಕಲಾಗಿದ್ದು, 45ವರ್ಷ ಮೇಲ್ಪಟ್ಟ 2,87,042 ಮಂದಿಗೆ ಮೊದಲ ಡೋಸ್, 130588 ಮಂದಿಗೆ ಎರಡನೆ ಡೋಸ್ ಚುಚ್ಚುಮದ್ದು ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 456159 ಮಂದಿಗೆ ಮೊದಲ ಡೋಸ್ ಲಸಿಕೆ ಸಿಕ್ಕಿದ್ದರೆ, 156065 ಮಂದಿಗೆ ಎರಡನೇ ಡೋಸ್ ಹಾಕಲಾಗಿದೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಲಸಿಕೆಯ ಪ್ರಮಾಣ ಹೆಚ್ಚಾಗಿದೆ.
ವಿದೇಶಕ್ಕೆ ತೆರಳುವವರಿಗೆ ಮಾತ್ರ ಇಂದು ಲಸಿಕೆ:
ಜುಲೈ 16ರಂದು ನಗರದ ಸರ್ಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆಯಲ್ಲಿ ಜುಲೈ 20ರ ಒಳಗೆ ವಿದೇಶ ಪ್ರಯಾಣ ಮಾಡುವವರಿಗೆ ಮಾತ್ರ ಕೋವಿಶೀಲ್ಡ್ ಲಸಿಕೆ ಹಾಕಲಾಗುತ್ತಿದೆ. ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವವರು 2 ನೇ ಡೋಸ್ ಕೋವಿಶೀಲ್ಡ್ ಪಡೆಯಬಹುದು. 60 ಡೋಸ್ ಲಸಿಕೆಗಳು ಮಾತ್ರ ಲಭ್ಯವಿದೆ ಎಂದು ಡಿಎಚ್ಒ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.