ಉಡುಪಿ: ಮಣಿಪಾಲದ ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾದ ವಾಕ್ ಇನ್ ಲ್ಯಾಬ್ ಪ್ರಯೋಗಾಲಯ ಮತ್ತು ಮಾದರಿ ಸಂಗ್ರಹ ಸೇವೆಗಳಿಗೆ ಚಾಲನೆ ನೀಡಲಾಯಿತು.
ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗಭೂಷಣ್ ಉಡುಪ ‘ಹೊಸ ಸೇವೆಗಳು ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನವಾಗಲಿದ್ದು, ಜನಮುಖಿ ಸೇವೆಗಳನ್ನು ನೀಡುವಲ್ಲಿ ಮಣಿಪಾಲ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ’ ಎಂದರು.
ಕೆಎಂಸಿ ಡೀನ್ ಡಾ. ಶರತ್ ಕುಮಾರ್ ರಾವ್ ಮಾತನಾಡಿ, ಕಸ್ತೂರಬಾ ಆಸ್ಪತ್ರೆಯ ಪ್ರಯೋಗಾಲಯವು ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಸೇವೆಗೆ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಎಲ್ಲ ರೀತಿಯ ಪರೀಕ್ಷೆಯ ಮಾದರಿಗಳನ್ನು ಆಸ್ಪತ್ರೆಯ ಒಳಾಂಗಣ ಪ್ರವೇಶಿಸದೆ ನೀಡುವ ವ್ಯವಸ್ಥೆ ಇದ್ದು, ಮಣಿಪಾಲ ಬಸ್ ನಿಲ್ದಾಣದ ಸಮೀಪದಲ್ಲಿಯೇ ವ್ಯವಸ್ಥೆ ಇದೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮಾತನಾಡಿ, ಪ್ರಯೋಗಾಲಯದ ಸೇವೆಗಳನ್ನು ಪಡೆಯಲು ರೋಗಿಗಳು ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆಯಿಲ್ಲ. ಜತೆಗೆ, ಪರೀಕ್ಷಾ ವರದಿಗಳನ್ನು ಡಿಜಿಟಲ್ ರೂಪದಲ್ಲಿಯೂ ಪಡೆಯಬಹುದು. ಸಾಮಾನ್ಯ ಲ್ಯಾಬ್ ಪರೀಕ್ಷೆಗಳಿಗೆ ವೈದ್ಯರ ಚೀಟಿಯ ಅಗತ್ಯವಿಲ್ಲ ಹಾಗೂ ಹೊರಗಿನ ವೈದ್ಯರು ಶಿಫಾರಸು ಮಾಡಿದ ಪರೀಕ್ಷೆಗಳನ್ನು ಸಹ ಮಾಡಲಾಗುವುದು ಎಂದರು.
ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ ಡೀನ್ ಡಾ. ಅರುಣ್ ಮಯ್ಯ, ಕೆಎಂಸಿ ಮಣಿಪಾಲದ ಸಹ ಡೀನ್ ಡಾ.ಕೃಷ್ಣಾನಂದ ಪ್ರಭು, ಉಪ ವ್ಯವಸ್ಥಾಪಕ ಡಾ. ಪದ್ಮರಾಜ್ ಹೆಗ್ಡೆ , ಕಸ್ತೂರಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳ ನಿರ್ದೇಶಕ ಡಾ. ರವೀಂದ್ರ ಮರಡಿ, ಬಯೋ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ಡಾ. ವರಶ್ರೀ, ಲ್ಯಾಬ್ ಟೆಕ್ನಾಲಾಜಿ ಮುಖ್ಯಸ್ಥರಾದ ಡಾ. ಸರಿತಾ ಕಾಮತ್ ಇದ್ದರು. ನಗರಸಭೆ ಸದಸ್ಯರಾದ ಮಂಜುನಾಥ್ ಅಭಿನಂದಿಸಿದರು.
ವಾಕ್ ಇನ್ ಲ್ಯಾಬ್ ಪ್ರಯೋಗಾಲಯ ಸೌಲಭ್ಯವು ಮಣಿಪಾಲದ ಟೈಗರ್ ಸರ್ಕಲ್ನಲ್ಲಿರುವ ಬಯೊ ಕೆಮಿಸ್ಟ್ರಿ ವಿಭಾಗದ ನೆಲಮಹಡಿಯಲ್ಲಿ ದೊರೆಯಲಿದ್ದು, ಬೆಳಿಗ್ಗೆ 6ರಿಂದ ರಾತ್ರಿ 7 ಗಂಟೆಯವರೆಗೆ ಕಾರ್ಯಾಚರಿಸಲಿದೆ. ಹೆಚ್ಚಿನ ಮಾಹಿತಿ ಮತ್ತು ವಿಚಾರಣೆಗೆ 0820- 2923308 ಸಂಪರ್ಕಿಸಬಹುದು ಎಂದು ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.