ಬ್ರಹ್ಮಾವರ: ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ನ ಬೆಳ್ಳಿಹಬ್ಬದ ಸಂಭ್ರಮ ಹಾಗೂ ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ ಪ್ರಯುಕ್ತ ಮಟಪಾಡಿಯ ಚಪ್ಟೇಗಾರ್ ಸಭಾಭವನದಲ್ಲಿ ಚೂಡಾಮಣಿ ಲಂಕಾದಹನ ಯಕ್ಷಗಾನ ಗೊಂಬೆಯಾಟ ಪ್ರದರ್ಶನ ನಡೆಯಿತು.
ಯಕ್ಷಗಾನ ಪಾತ್ರಧಾರಿಯ ವೇಷ ತೊಟ್ಟ ಗೊಂಬೆಗಳನ್ನು ಸೂತ್ರದ ಮೂಲಕ ಸೊಗಸಾಗಿ ಕುಣಿಸಿದ ಸೂತ್ರಧಾರ ಗೊಂಬೆಯ ಕುಣಿತಕ್ಕೆ ತಕ್ಕ ವಿವರಗಳನ್ನು ನೀಡುತ್ತಾ ನೆರೆದಿದ್ದವರನ್ನು ರಂಚಿಸಿದರು.
ಗೊಂಬೆ ಕುಣಿತದ ಭಾಗವತರು, ಯಕ್ಷಗಾನ, ಚಂಡೆ, ಮದ್ದಳೆ, ತಾಳ, ಹಾರ್ಮೊನೀಯಂ ವಾದ್ಯ ಪ್ರದರ್ಶನದ ಕಳೆ ಹೆಚ್ಚಿಸಿದವು. ಗೊಂಬೆಗಳ ಭಾಗಗಳಿಗೆ ಸೂತ್ರ ಅಳವಡಿಸಿ ಅವೆಲ್ಲವನ್ನೂ ನಿಯಂತ್ರಿಸುತ್ತ ಸೂತ್ರಧಾರನೂ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರರನ್ನು ರಂಜಿಸಿದರು.
ಗೊಂಬೆಯಾಟ ಪ್ರದರ್ಶನದ ಬಳಿಕ ಮಟಪಾಡಿ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯಿಂದ ಕುಂದಾಪುರದ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಉಸ್ತುವಾರಿ ಭಾಸ್ಕರ್ ಕಾಮತ್ ಅವರಿಗೆ ಸನ್ಮಾನ ಮಾಡಲಾಯಿತು.
ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಗೌರವಾಧ್ಯಕ್ಷ ಚಂದ್ರಶೇಖರ ಕಲ್ಕೂರ, ಅಧ್ಯಕ್ಷರಾದ ಸ್ಯಾಮ್ಸನ್ ಸಿಕ್ವೇರಾ, ಸೊರ್ಪು ಸದಾನಂದ ಪಾಟೀಲ್, ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಲಾವಿದರ ಚೇತನ್ ಮಟಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶರೋನ್ ಸಿಕ್ವೇರಾ ಧನ್ಯವಾದ ಸಮರ್ಪಿಸಿದರು.