ಹೊನ್ನಾವರ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೃಷಿ ಕಾಯ್ದೆ ವಿರೋಧಿಸಿ, ಅಖಿಲ ಭಾರತ್ ಕಿಸಾನ್ ಸಭಾ ಕರೆ ನೀಡಿರುವ ಪ್ರತಿಭಟನೆಯನ್ನು ಕರ್ನಾಟಕ ಪ್ರಾಂತ ರೈತ ಸಂಘವು ಬೆಂಬಲಿಸಿದ. ತಾಲ್ಲೂಕಿನ ಅಪ್ಸರಕೊಂಡದ ಸಮೀಪ ಶನಿವಾರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಲಾಯಿತು.
ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, 'ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೂರು ಕೃಷಿ ಕಾನೂನು ವಾಪಸ್ ಪಡೆಯಬೇಕು. ರೈತರು ಪ್ರತಿಭಟನೆ ಹಮ್ಮಿಕೊಂಡಿರುವ ಜಾಗದಲ್ಲಿ ಅವರಿಗೆ ಮೂಲ ಸೌಕರ್ಯ ಒದಗಿಸಬೇಕು' ಎಂದು ಆಗ್ರಹಿಸಿದರು.
ವಾಹನ ಸಂಚಾರಕ್ಕೆ ತಡೆಯು ಸಾಂಕೇತಿಕವಾಗಿ ನಡೆಯಿತು. ಸ್ವಲ್ಪ ಹೊತ್ತು ಸಂಚಾರಕ್ಕೆ ಅಡಚಣೆಯಾಯಿತು. ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರಕಾಂತ ಕೊಚರೇಕರ, ತಿಲಕ ಗೌಡ, ಮಂಜುನಾಥ ಗೌಡ, ತಿಮ್ಮಪ್ಪ ಗೌಡ ಮಾತನಾಡಿದರು.