ಜ.5ರಂದು ಸಂಜೆ 6.07 ನಿಮಿಷಕ್ಕೆ, ಬೆಂಗಳೂರಿಗೆ ತೆರಳುವ 'ಪಂಚಗಂಗಾ ಎಕ್ಸ್ಪ್ರೆಸ್' (ಸಂಖ್ಯೆ 16596) ರೈಲು ಕಾರವಾರ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ ಒಂದರಿಂದ ಹೊರಟಿತ್ತು. ಆಗ, ಎಸ್-4 ಬೋಗಿಯನ್ನೇರಲು 59 ವರ್ಷದ ಪುರುಷ ಪ್ರಯಾಣಿಕ ಮುಂದಾದರು. ಆಯತಪ್ಪಿ ಬಿದ್ದ ಅವರು, ರೈಲಿನ ಗಾಲಿಗೆ ಸಿಲುಕುವ ಸಾಧ್ಯತೆಯಿತ್ತು. ಅದನ್ನು ಗಮನಿಸಿದ ಕಾನ್ಸ್ಟೆಬಲ್ ನರೇಂದ್ರ ನಾಯ್ಕ, ತಕ್ಷಣ ಓಡಿಬಂದರು. ಬಿದ್ದ ಪ್ರಯಾಣಿಕನನ್ನು ಕೈ ಹಿಡಿದು ಎಳೆದು ಪಕ್ಕಕ್ಕೆ ಸರಿಸಿದರು. ಈ ಮೂಲಕ ಪ್ರಯಾಣಿಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು.