ಪರಮೇಶ್ವರ ನಾಯ್ಕ ಅವರು ಮಕ್ಕಳಿಗೆ ಕಲಿಯಲು ಪ್ರೇರಣೆ ನೀಡುವ ಉದ್ದೇಶದಿಂದ 2016ರಲ್ಲಿ 13 ವಿದ್ಯಾರ್ಥಿನಿಯರ ಒಂದು ಗುಂಪನ್ನು ರಚಿಸಿದರು. ಅವರಿಂದ ಪ್ರತಿವಾರ ತಲಾ ₹ 5 ವಂತಿಗೆ ಮೊತ್ತ ಹಾಕಿಸಿದರು. ವಿದ್ಯಾರ್ಥಿನಿಯರು ಪ್ರತಿ ವಾರ ಸಭೆ ಸೇರಿ ತಮ್ಮ ಪಾಲಕರಿಂದ ಹಣ ಪಡೆದು ವಂತಿಗೆ ನೀಡುತ್ತಿದ್ದರು. ಆ ಮೊತ್ತವು ₹ 1,000 ಆದಾಗ ಶಿಕ್ಷಣಕ್ಕೆ ಅಗತ್ಯ ಇರುವ ವಿದ್ಯಾರ್ಥಿನಿಗೆ ನೀಡಲಾಗುತ್ತಿತ್ತು. ಬಸ್ ಪಾಸ್, ಶಾಲಾ ಶುಲ್ಕ, ಸಮವಸ್ತ್ರ ಸೇರಿದಂತೆ ಅವರ ಅಗತ್ಯಕ್ಕೆ ಈ ಹಣ ಉಪಯೋಗವಾಗುತ್ತಿತ್ತು. ವಿದ್ಯಾರ್ಥಿನಿ ತನಗೆ ಹಣದ ಅನುಕೂಲ ಆದಾಗ ತೆಗದುಕೊಂಡ ಹಣಕ್ಕೆ ಒಂದಿಷ್ಟು ಹೆಚ್ಚಿನ ಮೊತ್ತ ಸೇರಿಸಿ ವಾಪಸ್ ನೀಡುತ್ತಿದ್ದಳು. ಈ ಗುಂಪಿನ ವಂತಿಗೆ ಹಣದಿಂದಲೇ ಕೆಲವು ವಿದ್ಯಾರ್ಥಿನಿಯರು ಶಿಕ್ಷಣ ಮುಗಿಸಿ ಉದ್ಯೋಗಕ್ಕೆ ಸೇರಿದ್ದಾರೆ.