ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ದೇವಾಲಯವೇ ಮಕ್ಕಳ ‘ವಿದ್ಯಾ ದೇಗುಲ’

ಉಚಿತ ಶಿಕ್ಷಣ ನೀಡುತ್ತಿರುವ ಯುವಕ: 40 ವಿದ್ಯಾರ್ಥಿಗಳಿಗೆ ಬೋಧನೆ
Last Updated 23 ಸೆಪ್ಟೆಂಬರ್ 2020, 16:37 IST
ಅಕ್ಷರ ಗಾತ್ರ

ಮುಂಡಗೋಡ (ಉತ್ತರ ಕನ್ನಡ): ಸಂಜೆ ಆಗುತ್ತಿದ್ದಂತೆ ಅಲ್ಲಿ ಮಕ್ಕಳು ಸೇರುತ್ತಾರೆ. ಪರಸ್ಪರ ಅಂತರ ಕಾಪಾಡಿಕೊಂಡು, ಆ ದಿನದ ‘ಮನೆಗೆಲಸ’ ಮಾಡಲು ಅಣಿಯಾಗುತ್ತಾರೆ. ಆನ್‌ಲೈನ್ ಮೂಲಕ ನೀಡಿರುವ ಪಾಠಗಳನ್ನು ಮನನ ಮಾಡಿಕೊಳ್ಳುತ್ತಾರೆ. ಅರ್ಥವಾಗದ ವಿಷಯಗಳನ್ನು ಅಲ್ಲಿನ ಯುವಕ ತಾಳ್ಮೆಯಿಂದ ಬಿಡಿಸಿ ಹೇಳಿಕೊಡುತ್ತಾರೆ.

ತಾಲ್ಲೂಕಿನ ನಂದಿಕಟ್ಟಾ ಗ್ರಾಮದ ಸಚಿನ್ ರಾಧಾಪುರ ಎಂಬುವವರು ಒಂದು ತಿಂಗಳಿಂದ 40 ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಗಣಪತಿ ದೇವಸ್ಥಾನದ ಆವರಣವೇ ತರಗತಿ ನಡೆಯುವ ಸ್ಥಳ.

‘ಪ್ರತಿ ದಿನ ಸಂಜೆ ಐದರಿಂದ ಏಳು ಗಂಟೆಯವರೆಗೆ, ಕೆಲವೊಮ್ಮೆ ನಂತರವೂ ಮಕ್ಕಳಿಗೆ ಕಲಿಸುತ್ತೇನೆ. ಸದ್ಯ ನಾಲ್ಕನೇ ತರಗತಿಯಿಂದ ಎಂಟನೇ ತರಗತಿವರೆಗಿನ ಮಕ್ಕಳು ಕಲಿಯಲು ಬರುತ್ತಿದ್ದಾರೆ. ಆನ್‌ಲೈನ್ ಮೂಲಕ ನೀಡಿರುವ ಚಟುವಟಿಕೆ ಮತ್ತು ವಿದ್ಯಾಗಮದ ಮೂಲಕ ಶಿಕ್ಷಕರು ಹೇಳುವ ಪಾಠ, ಮನೆಗೆಲಸವನ್ನು ಮಕ್ಕಳಿಕೆ ಮನವರಿಕೆ ಆಗುವಂತೆ ತಿಳಿಸುತ್ತೇನೆ. ಯಾವ ವಿದ್ಯಾರ್ಥಿಯಿಂದಲೂ ಹಣ ಪಡೆಯುವುದಿಲ್ಲ’ ಎನ್ನುತ್ತಾರೆ ಯುವಕ ಸಚಿನ್ ರಾಧಾಪುರ.

‘ಈ ಹಿಂದೆಯೂ ಶಾಲೆಯೊಂದರಲ್ಲಿ ಕೆಲವು ದಿನಗಳವರೆಗೆ ಪಾಠ ಮಾಡಿದ್ದೆ. ಮಕ್ಕಳಿಗೆ ಕ್ರೀಡಾ ತರಬೇತಿ ನೀಡುವ ಕೆಲಸ ಸಹ ಮಾಡಿದ್ದೇನೆ. ನನಗೆ ಗೊತ್ತಿರುವಷ್ಟು ಮಕ್ಕಳಿಗೆ ಕಲಿಸಬೇಕೆಂಬ ಆಸೆಯಿದೆ. ಪಿ.ಯು.ಸಿ ಮುಗಿಸಿದ ನಂತರ ದೂರಶಿಕ್ಷಣದ ಮೂಲಕ ಪದವಿ ಅಧ್ಯಯನ ಮಾಡುತ್ತಿದ್ದೇನೆ’ ಎಂದರು.

‘ಮನೆಯಲ್ಲಿ ಓದು ಎಂದರೆ ಮಕ್ಕಳು ಮಾತು ಕೇಳುವುದಿಲ್ಲ. ಆದರೆ, ಇಲ್ಲಿ ಚೆನ್ನಾಗಿ ಕಲಿಯುತ್ತಾರೆ. ಶಾಲೆ ಆರಂಭವಾಗುವವರೆಗೂ ಸಂಜೆ ವೇಳೆ ಶಿಕ್ಷಣ ನೀಡುವಂತೆ ಸಚಿನ್‌ಗೆ ಮನವಿ ಮಾಡಿದ್ದೇವೆ’ ಎಂದು ಪಾಲಕ ಬಸವರಾಜ ಮೋರೆ ಹೇಳುತ್ತಾರೆ.

ಶ್ಲಾಘನೀಯ:‘ಕೊರೊನಾದಿಂದಾಗಿ ಶಾಲೆಗಳಲ್ಲಿ ತರಗತಿಗಳು ಆರಂಭವಾಗಿಲ್ಲ. ಆನ್‌ಲೈನ್, ವಿದ್ಯಾಗಮದ ಮೂಲಕ ನೀಡುವ ಶಿಕ್ಷಣವನ್ನೇ ಮಕ್ಕಳಿಗೆ ಮನನ ಮಾಡುವ ಯುವಕನ ಕೆಲಸ ಶ್ಲಾಘನೀಯವಾಗಿದೆ. ನಿಗದಿತ ಅಂತರ ಕಾಪಾಡಿಕೊಂಡು, ಮುಖಗವಸು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುತ್ತ, ಪ್ರತಿ ದಿನ ಎರಡು– ಮೂರು ಗಂಟೆ ಕಲಿಸುತ್ತಾರೆ’ ಎಂದು ಗ್ರಾಮದ ಯುವ ಮುಖಂಡ ಸುನೀಲ ಕೊಟಗೊಣಸಿ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT