ಶಿರಸಿ: ‘ವರದಾ ನದಿ ಪ್ರವಾಹ, ನಿರಂತರ ಮಳೆಯಿಂದ ನೂರಾರು ಹೆಕ್ಟೇರ್ ಬೆಳೆ ಕಳೆದುಕೊಂಡಿರುವ ಬನವಾಸಿ ಭಾಗದ ರೈತರ ಸಾಲಮನ್ನಾ ಮಾಡಲು ಸರ್ಕಾರ ವಿಶೇಷ ನಿರ್ಣಯ ಕೈಗೊಳ್ಳಬೇಕು’ ಎಂಬ ಆಗ್ರಹ ಬನವಾಸಿ ಹೋಬಳಿಯ ಹಲವು ರೈತರಿಂದ ವ್ಯಕ್ತವಾಯಿತು.
ಬನವಾಸಿಯ ಅಂಬೇಡ್ಕರ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರು ತಮ್ಮ ಸಮಸ್ಯೆಗಳನ್ನು ತೆರೆದಿಟ್ಟರು.
‘ಬನವಾಸಿ ಹೋಬಳಿಯಲ್ಲಿ ನೂರಾರು ಹೆಕ್ಟೇರ್ ಬೆಳೆಗಳಿಗೆ ಹಾನಿ ಉಂಟಾಗಿದೆ. ಸರ್ಕಾರ ಅತ್ಯಲ್ಪ ಪರಿಹಾರದ ಬದಲು ಸಮರ್ಪಕ ಪರಿಹಾರ ಒದಗಿಸಬೇಕು’ ಎಂದು ರೈತ ಮುಖಂಡ ಸಿ.ಎಫ್.ನಾಯ್ಕ ಒತ್ತಾಯಿಸಿದರು.
ರೈತ ಭದ್ರಾ ಗೌಡ, ‘ಬದನಗೋಡ ವ್ಯಾಪ್ತಿಯಲ್ಲಿ ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಇದುವರೆಗೂ ಪರಿಹಾರ ಸಿಕ್ಕಿಲ್ಲ. ಅಧಿಕಾರಿಗಳು ಸಮೀಕ್ಷೆ ಮುಗಿದಿಲ್ಲ ಎನ್ನುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾಶಿ ಗ್ರಾಮ ಪಂಚಾಯ್ತಿ ಸದಸ್ಯ ವಿನಯ ಗೌಡರ್, ‘ಶುಂಠಿ ಕೊಳೆ ಜೋರಾಗಿದೆ. ನೆರೆ ಪರಿಹಾರ ಪ್ರತಿ ಎಕರೆಗೆ ₹3800 ಮಾತ್ರ ನೀಡಲಾಗುತ್ತಿದೆ. ಮರು ಬಿತ್ತನೆ ಮಾಡಲೂ ರೈತರಿಗೆ ಆಗುತ್ತಿಲ್ಲ’ ಎಂದರು.
ಕೃಷಿ ಇಲಾಖೆ ಉಪ ನಿರ್ದೇಶಕ ಟಿ.ಎಚ್.ನಟರಾಜ, ‘ಕಳೆದ ಐದು ವರ್ಷಗಳ ಸರಾಸರಿ ಮಳೆ, ಹಾನಿ ಆಧರಿಸಿ ಬೆಳೆ ವಿಮೆ ನೀಡಲಾಗುತ್ತದೆ. ರೈತರು ಬೆಳೆ ವಿಮೆ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು’ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್, ‘ಬೆಳೆ ಹಾನಿಯ ಪರಿಹಾರವನ್ನು ಸರ್ಕಾರ ಪರಿಷ್ಕರಿಸಿದ್ದು, ಪ್ರತಿ ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟಕ್ಕೆ ₹ 28 ಸಾವಿರ ಪರಿಹಾರ ನೀಡಲಾಗುತ್ತಿದೆ’ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗಣೇಶ್ ಹೆಗಡೆ ಇದ್ದರು.ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂದೇಶ ಭಟ್, ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ಇದ್ದರು. ರಾಘವೇಂದ್ರ ಬೆಟ್ಕೊಪ್ಪ ನಿರೂಪಿಸಿದರು.