ಭಟ್ಕಳ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಗಳು ಮತ್ತು ಅನಾರೋಗ್ಯದಲ್ಲಿದ್ದ ತಂದೆ, ಇಬ್ಬರೂ ಸೋಮವಾರ ಮೃತಪಟ್ಟ ಘಟನೆ ತಾಲ್ಲೂಕಿನ ಮಾರುಕೇರಿಯಲ್ಲಿ ನಡೆದಿದೆ.
ಮಾರುಕೇರಿ ಹೆಜ್ಜಿಲು ನಿವಾಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಕಾವ್ಯಾ ರಾಮ ಗೊಂಡ (15) ಉಡುಪಿಯ ಆಸ್ಪತ್ರೆಯಲ್ಲಿ ಮೃತಪಟ್ಟರೆ, ತಂದೆ ರಾಮ ಸುಕ್ರ ಗೊಂಡ (46) ಸ್ವಗೃಹದಲ್ಲಿ ನಿಧನರಾದರು.
ಕಾವ್ಯಾ ತಾಲ್ಲೂಕಿನ ಕಿತ್ತೂರು ರಾಣಿ ಚನ್ನಮ್ಮಾ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಎರಡು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿ, ಸೋಮವಾರ ಬೆಳಿಗ್ಗೆ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡಿತು. ಹಾಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಳು.
ಕಾವ್ಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ, ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಮನೆಯಲ್ಲೇ ಹೃದಯಾಘಾತಕ್ಕೀಡಾದರು. ತಂದೆ, ಮಗಳ ಸಾವಿನ ಸುದ್ದಿ ತಿಳಿದ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.