ಕಾರವಾರ: ಜಿಲ್ಲೆಯಲ್ಲಿ ಮತ್ತೆ51 ಮಂದಿಗೆ ಕೋವಿಡ್ 19 ದೃಢಪಟ್ಟಿರುವುದು ಆರೋಗ್ಯ ಇಲಾಖೆಯಗುರುವಾರದ ಬುಲೆಟಿನ್ನಲ್ಲಿ ತಿಳಿದುಬಂದಿದೆ. ಈ ಪೈಕಿ ಹಳಿಯಾಳ ಮತ್ತು ದಾಂಡೇಲಿ ತಾಲ್ಲೂಕುಗಳಲ್ಲಿ ಒಟ್ಟು 17,ಶಿರಸಿ ತಾಲ್ಲೂಕಿನಲ್ಲಿ 12 ಮಂದಿಗೆ ಸೋಂಕು ಖಚಿತವಾಗಿದೆ.
ಅದೇರೀತಿ, ಭಟ್ಕಳ ತಾಲ್ಲೂಕಿನಲ್ಲಿ ಎಂಟು ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅಂಕೋಲಾ ತಾಲ್ಲೂಕಿನಲ್ಲಿ ಐವರಿಗೆ, ಮುಂಡಗೋಡ ತಾಲ್ಲೂಕಿನಲ್ಲಿ ನಾಲ್ವರು, ಯಲ್ಲಾಪುರ ತಾಲ್ಲೂಕಿನಲ್ಲಿ ಇಬ್ಬರಿಗೆ,ಸಿದ್ದಾಪುರ, ಕಾರವಾರ ಹಾಗೂ ಹೊನ್ನಾವರ ತಾಲ್ಲೂಕಿನಲ್ಲಿ ತಲಾ ಒಬ್ಬರು ಸೋಂಕಿತರಾಗಿದ್ದಾರೆ.
ಈಗಾಗಲೇ ಸೋಂಕಿತರಾದವರ ಸಂಪರ್ಕಕ್ಕೆ ಬಂದ ಮತ್ತಷ್ಟು ಮಂದಿಯೇ ಹೊಸದಾಗಿ ಸೋಂಕಿತರಾಗಿದ್ದಾರೆ. ಅವರಲ್ಲಿ ಕೆಲವರಿಗೆ ತೀವ್ರ ಉಸಿರಾಟದ ಸಮಸ್ಯೆಯಿದೆ(ಎಸ್.ಎ.ಆರ್.ಐ) ಎಂದು ಬುಲೆಟಿನ್ನಲ್ಲಿ ಉಲ್ಲೇಖಿಸಲಾಗಿದೆ.ಅಂತೆಯೇ ಕೆಲವರಿಗೆ ಜ್ವರದ (ಐ.ಎಲ್.ಐ) ಲಕ್ಷಣಗಳೂ ಇವೆ. ಆರು ಮಂದಿ ದೇಶದ ಒಳಗೆ ಪ್ರಯಾಣಿಸಿದ ಹಿನ್ನೆಲೆಯನ್ನೂ ಹೊಂದಿದ್ದಾರೆ.
ಸೋಂಕಿನ ಮೂಲ ತಿಳಿದಿಲ್ಲ:ಗುರುವಾರ ದೃಢಪಟ್ಟ ಪ್ರಕರಣಗಳಲ್ಲಿ 15ಕ್ಕೂ ಅಧಿಕ ಮಂದಿಗೆ ಸೋಂಕು ಎಲ್ಲಿಂದ ಬಂತು ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ರೀತಿಯ ಪ್ರಕರಣಗಳು ಕೆಲವು ದಿನಗಳಿಂದ ಹೆಚ್ಚುತ್ತಿರುವುದು ಇಲಾಖೆಯ ಸಿಬ್ಬಂದಿಗೂ ಸವಾಲಾಗಿ ಪರಿಣಮಿಸುತ್ತಿವೆ.
ಇಬ್ಬರ ಸಾವು: ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ. ಅವರಲ್ಲಿ ಕೋವಿಡ್ 19 ಇರುವುದು ಗುರುವಾರ ದೃಢಪಟ್ಟಿದೆ.
ಅವರಲ್ಲಿ ಒಬ್ಬರಾದ ಅಂಕೋಲಾದ ಕ್ಯಾನ್ಸರ್ ರೋಗಿಯೊಬ್ಬರು ಜುಲೈ 13ರಂದು ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತದೇಹದ ಗಂಟಲುದ್ರವದ ಪರೀಕ್ಷೆ ಮಾಡಿದಾಗ ಕೋವಿಡ್ ದೃಢಪಟ್ಟಿದೆ.
ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಭಟ್ಕಳದ ರೋಗಿಯೊಬ್ಬರುಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ. ಅವರಿಗೂಕೋವಿಡ್ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
ಎಂಟು ಮಂದಿ ಗುಣಮುಖ:ಕೋವಿಡ್ 19ನಿಂದ ಗುಣಮುಖರಾದ ಎಂಟು ಮಂದಿಯನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ವಾರ್ಡ್ನಿಂದ ಗುರುವಾರ ಬಿಡುಗಡೆ ಮಾಡಲಾಯಿತು.
ಅವರಲ್ಲಿ ಕಾರವಾರ ತಾಲ್ಲೂಕಿನ ಆರು ಮಂದಿ, ದಾಂಡೇಲಿಮತ್ತುಶಿರಸಿ ತಾಲ್ಲೂಕುಗಳ ತಲಾ ಒಬ್ಬರು ಸೇರಿದ್ದಾರೆ. ಅವರನ್ನು ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತರಕರ್ ಹಾಗೂ ಸಿಬ್ಬಂದಿ ಶುಭ ಹಾರೈಸಿ ಬೀಳ್ಕೊಟ್ಟರು.