ಶಿರಸಿ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು 9ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಸದಾಶಿವಳ್ಳಿ ಗ್ರಾಮದಲ್ಲಿ ಧರೆ ಕುಸಿತ ಉಂಟಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಐದು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ನಗರದ ಬೆನಕ ಕಾಲೊನಿಯಲ್ಲಿ ಬಾಬು ಪಟಗಾರ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದೆ. ಬದನಗೋಡ ಗ್ರಾಮ ಪಂಚಾಯ್ತಿಯ ಹೊಸಕೊಪ್ಪದಲ್ಲಿ ಪರಶುರಾಮ ರಿತ್ತಿ ಅವರ ಮನೆಯ ಗೊಡೆ, ಚಾವಣಿ ಕುಸಿದಿದೆ.
ಅತಿ ಮಳೆಯಿಂದ ಹಂಚಿನಕೇರಿ, ಮರಾಠಿಕೊಪ್ಪ, ಕಾಗೇರಿ, ಬಸಲೆಕೊಪ್ಪ, ಆನಗೋಡಕೊಪ್ಪ ಸೇರಿದಂತೆ ಹಲವೆಡೆ ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.
ಶಿರಸಿ–ಹೊಸನಗರ ರಾಜ್ಯ ಹೆದ್ದಾರಿ ಮೇಲೆ ಬನವಾಸಿಯಲ್ಲಿ ಮಂಗಳವಾರ ಬೃಹತ್ ಗಾತ್ರದ ಮರ ಬುಡ ಸಮೇತ ಕಿತ್ತು ಬಿದ್ದಿದೆ. ಇದರಿಂದ ಕೆಲವು ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವರದಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದ್ದು ಮೊಗಳ್ಳಿ ಗ್ರಾಮದ ಕೃಷಿ ಜಮೀನು ಪುನಃ ಜಲಾವೃತಗೊಂಡಿದೆ.
‘ಅಪಾಯದ ಅಂಚಿನಲ್ಲಿರುವ ಸ್ಥಳಗಳ ಸಮೀಪದ ನಿವಾಸಿಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಕ್ರಮವಹಿಸಿದ್ದೇವೆ. ಸಮೀಪದಲ್ಲಿರುವ ಶಾಲೆ ಅಥವಾ ಸಮುದಾಯ ಭವನದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ತಹಶೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದ್ದಾರೆ.