ಭಟ್ಕಳ: ತಾಲ್ಲೂಕಿನಲ್ಲಿ ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗಾಳಿ ಮಳೆ ಕಡಿಮೆಯಾಗಿದ್ದರೂ ಸಂಜೆ ಮತ್ತೆ ಗಾಳಿಯೊಂದಿಗೆ ಬಿರುಸಿನ ಮಳೆ ಸುರಿಯಿತು.
ಎರಡೇ ದಿನ ಗಾಳಿ ಮಳೆಗೆ ತಾಲ್ಲೂಕಿನಾದ್ಯಂತ ಸುಮಾರು 17 ವಿದ್ಯುತ್ ಕಂಬಗಳು ಧರೆಗುರುಳಿವೆ. ಮೂರು ವಿದ್ಯುತ್ ಪರಿವರ್ತಕಗಳಿಗೆ ಆಗಿರುವ ಹಾನಿಯೂ ಸೇರಿದಂತೆ ಹೆಸ್ಕಾಂಗೆ ಸುಮಾರು ₹8.34 ಲಕ್ಷ ಹಾನಿಯಾಗಿದೆ ಎಂದು ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಇಲ್ಲಿನ ಹನುಮಾನ್ ನಗರದಲ್ಲಿ ಸಾವಿತ್ರಿ ನಾಯ್ಕ ಎಂಬುವವರ, ತಿಂಗಳ ಹಿಂದೆಯಷ್ಟೆಮನೆಗೆಅಳವಡಿಸಿದ್ದ ತಗಡಿನ ಚಾವಣಿ ಹಾರಿಹೋಗಿದೆ.
ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿದ್ದು, ಮೀನುಗಾರಿಕೆಗೆ ತೆರಳಿದ್ದ ದೋಣಿಗಳೆಲ್ಲಾ ಹಿಂತಿರುಗಿ ಬಂದರಿನಲ್ಲಿ ಲಂಗರು ಹಾಕಿವೆ. ಸಾಕಷ್ಟು ಮಳೆ ಬಂದಿದ್ದರಿಂದ ಭೂಮಿ ಹದಗೊಂಡಿದ್ದು, ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆಗಳಿಗೆ ಚಾಲನೆ ದೊರಕಿದೆ.