ಅಂಕೋಲಾ: ತಾಲ್ಲೂಕಿನ ಮಾಸ್ತಿಕಟ್ಟೆ ಬಳಿ ಜಿಂಕೆಯ ತಲೆ ಬುರುಡೆ ಮತ್ತು ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಕಲ್ಲೇಶ್ವರದ ವಂಡರ ಮನೆಯ ಸೂರಜ್ ಶ್ರೀಧರ ಭಂಡಾರಿ (32), ಸಂದೀಪ ದಯಾನಂದ ಭಂಡಾರಿ (25), ಕನಕನಳ್ಳಿಯ ಪ್ರಸಾದ ರಾಮ ದೇಸಾಯಿ (23) ಮತ್ತು ಹಳಿಯಾಳ ಜನಗಾದ ಶೌಕತ್ ಸಾಬ್ ಹುಸೇನ್ ಸಾಬ್ ಮುಜಾವರ(27) ಬಂಧಿತ ಆರೋಪಿಗಳು.
ಜಿಂಕೆಯ ತಲೆ ಬುರುಡೆ ಸಹಿತ ಇರುವ ಕೊಂಬುಗಳು ಮೂರು ವರ್ಷಗಳ ಹಿಂದೆ ಇಲ್ಲಿನ ರಾಮನಗುಳಿ ಅರಣ್ಯ ವ್ಯಾಪ್ತಿಯಲ್ಲಿ ಸಿಕ್ಕಿತ್ತು. ಅವುಗಳನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಮಾರಾಟಕ್ಕೆ ತಂದಿದ್ದರು. ಕೃತ್ಯಕ್ಕೆ ಬಳಸಿದ ಎರ್ಟಿಗಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಅಂಕೋಲಾ ಠಾಣೆಯ ಪಿ.ಎಸ್.ಐ ಪ್ರೇಮನಗೌಡ ಪಾಟೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.