ಶಿರಸಿ: ಲಾಕ್ಡೌನ್ ಸಂದರ್ಭದಲ್ಲಿ ಅಜ್ಜಿಮನೆ ಸೇರಿರುವ ಇಬ್ಬರು ಪುಟಾಣಿಗಳು ಆನ್ಲೈನ್ ಪಾಠ ಕೇಳಲು, ನಿತ್ಯವೂ ಗದ್ದೆಯ ಹಾಡಿಯ ಮೇಲೆ ನಡೆದು, ಅರ್ಧ ಕಿ.ಮೀ ದೂರದ ಬೆಟ್ಟಕ್ಕೆ ಹೋಗುತ್ತಾರೆ. ಮೊಮ್ಮಕ್ಕಳಿಗೆ ಕಷ್ಟವಾಗದಿರಲೆಂದು ಅಜ್ಜ ಅಲ್ಲಿ ಅಡಿಕೆ ದಬ್ಬೆಯ ಅಟ್ಟ ಕಟ್ಟಿಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶಾಲೆಗೆ ಹೋಗುವ ಒಂದನೇ ತರಗತಿಯ ಸಾನ್ವಿ ಹೆಗಡೆ ಮತ್ತು ಆರನೇ ತರಗತಿ ಓದುವ ನಕುಲ್ ಹೆಗಡೆ, ಮೊದಲನೇ ಹಂತದ ಲಾಕ್ಡೌನ್ ವೇಳೆಗೆ ಅವರವರ ಅಮ್ಮನ ಜೊತೆ ಅಜ್ಜಿಮನೆಗೆ ಬಂದಿದ್ದರು. ಶಾಲೆ ಪುನರಾರಂಭ ತಡವಾಗುವ ಕಾರಣ ಈ ಮಕ್ಕಳಿಗೆ ಆನ್ಲೈನ್ ತರಗತಿಗಳು ಶುರುವಾಗಿವೆ.
‘ಮಕ್ಕಳು ಮೂರು ತಾಸು ಬೆಟ್ಟದಲ್ಲಿ ಕುಳಿತು ಪಾಠ ಕೇಳಲು ಕಷ್ಟ. ಹೀಗಾಗಿ, ಅಡಿಕೆ ದಬ್ಬೆಯಿಂದ ಸೀಟ್ ಕಟ್ಟಿಕೊಟ್ಟಿದ್ದೇವೆ. ಅಲ್ಲಿ ಮೊಬೈಲ್ ಹಿಡಿದು ಮಕ್ಕಳು ಪಾಠ ಕೇಳುತ್ತಾರೆ. ಎರಡು ದಿನಗಳಿಂದ ಜೋರು ಮಳೆಯಾಗುತ್ತಿದೆ. ಪಾಚಿಗಟ್ಟಿದ ನೆಲದಲ್ಲಿ ಜಾರಿಕೆ, ಬೆಟ್ಟದಲ್ಲಿ ರಕ್ತಹೀರುವ ಇಂಬಳದ ಕಾಟವೂ ಜೋರಾಗಿದೆ. ಇದೇ ರೀತಿ ಮಳೆಯಾದರೆ, ಕಾಲಿಗೆ ಅಂಟುವಾಳ ಕಾಯಿ ನೀರು ಹಚ್ಚಿಕೊಂಡು, ಇಂಬಳದಿಂದ ರಕ್ಷಣೆ ಪಡೆಯಬೇಕು. ಬಿಎಸ್ಎನ್ಎಲ್ ನೆಟ್ವರ್ಕ್ ಸರಿಯಾಗಿದ್ದರೆ, ಈ ರೀತಿ ನೆಟ್ವರ್ಕ್ ಅರಸಿ ಬೆಟ್ಟ ತಿರುಗುವ ಪ್ರಮೇಯ ಇರಲಿಲ್ಲ. ಮನೆಯಲ್ಲೇ ಬ್ರಾಡ್ಬ್ಯಾಂಡ್ ಸಂಪರ್ಕ ಪಡೆಯಬಹುದಿತ್ತು’ ಎನ್ನುತ್ತಾರೆ ಈ ಮಕ್ಕಳ ಸಂಬಂಧಿ, ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.