‘ಮಕ್ಕಳು ಮೂರು ತಾಸು ಬೆಟ್ಟದಲ್ಲಿ ಕುಳಿತು ಪಾಠ ಕೇಳಲು ಕಷ್ಟ. ಹೀಗಾಗಿ, ಅಡಿಕೆ ದಬ್ಬೆಯಿಂದ ಸೀಟ್ ಕಟ್ಟಿಕೊಟ್ಟಿದ್ದೇವೆ. ಅಲ್ಲಿ ಮೊಬೈಲ್ ಹಿಡಿದು ಮಕ್ಕಳು ಪಾಠ ಕೇಳುತ್ತಾರೆ. ಎರಡು ದಿನಗಳಿಂದ ಜೋರು ಮಳೆಯಾಗುತ್ತಿದೆ. ಪಾಚಿಗಟ್ಟಿದ ನೆಲದಲ್ಲಿ ಜಾರಿಕೆ, ಬೆಟ್ಟದಲ್ಲಿ ರಕ್ತಹೀರುವ ಇಂಬಳದ ಕಾಟವೂ ಜೋರಾಗಿದೆ. ಇದೇ ರೀತಿ ಮಳೆಯಾದರೆ, ಕಾಲಿಗೆ ಅಂಟುವಾಳ ಕಾಯಿ ನೀರು ಹಚ್ಚಿಕೊಂಡು, ಇಂಬಳದಿಂದ ರಕ್ಷಣೆ ಪಡೆಯಬೇಕು. ಬಿಎಸ್ಎನ್ಎಲ್ ನೆಟ್ವರ್ಕ್ ಸರಿಯಾಗಿದ್ದರೆ, ಈ ರೀತಿ ನೆಟ್ವರ್ಕ್ ಅರಸಿ ಬೆಟ್ಟ ತಿರುಗುವ ಪ್ರಮೇಯ ಇರಲಿಲ್ಲ. ಮನೆಯಲ್ಲೇ ಬ್ರಾಡ್ಬ್ಯಾಂಡ್ ಸಂಪರ್ಕ ಪಡೆಯಬಹುದಿತ್ತು’ ಎನ್ನುತ್ತಾರೆ ಈ ಮಕ್ಕಳ ಸಂಬಂಧಿ, ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರು.