ಶಿರಸಿ: ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಾಣಕ್ಕೆ ವಸತಿ ಯೋಜನೆಯಡಿ ಆದ್ಯತೆ ಕೊಡಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ತಾಲ್ಲೂಕಿನ ನೆರೆಬಾಧಿತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅತಿವೃಷ್ಟಿಯಲ್ಲಿ ಜಮೀನು, ಬೆಳೆ ಕಳೆದುಕೊಳ್ಳುವ ರೈತರಿಗೆ ಗರಿಷ್ಠ ಪರಿಹಾರ ಒದಗಿಸಬೇಕು. ಈಗಿನ ಎನ್.ಡಿ.ಆರ್.ಎಫ್. ಮಾರ್ಗಸೂಚಿಯಡಿ ನೀಡುವ ₹3,800 ಪರಿಹಾರವನ್ನು ₹10 ಸಾವಿರಕ್ಕೆ ಏರಿಕೆ ಮಾಡಬೇಕು’ ಎಂದರು.
‘ನೆರೆ ಸಂತ್ರಸ್ತರಾದವರಿಗೆ ಮನೆ ನಿರ್ಮಾಣಕ್ಕೆ ಎತ್ತರದ ಹಾಗೂ ಸುರಕ್ಷಿತ ಸ್ಥಳದಲ್ಲಿ ಕಡ್ಡಾಯವಾಗಿ ಪರ್ಯಾಯ ಭೂಮಿ ನೀಡಬೇಕು. ಅರಣ್ಯ ಭೂಮಿ ಇದ್ದರೂ ಅದನ್ನು ಸರ್ಕಾರ ಪಡೆದು ಸಂತ್ರಸ್ತರಿಗೆ ನೀಡಲಿ. ಅರಣ್ಯ ಇಲಾಖೆಗೆ ಅದರ ಬದಲು ಪರ್ಯಾಯ ಭೂಮಿ ಕೊಡಲಿ’ ಎಂದರು.
ತಾಲ್ಲೂಕಿನ ರೇವಣಕಟ್ಟಾ ಭಾಗದಲ್ಲಿ, ಸಿದ್ದಾಪುರ ತಾಲ್ಲೂಕಿನ ಹಸರಗೋಡ, ಹಾರ್ಸಿಕಟ್ಟಾ ಭಾಗದ ನೆರೆ ಬಾಧಿತ ಪ್ರದೇಶಕ್ಕೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ, ಪ್ರಮುಖರಾದ ದೀಪಕ ದೊಡ್ಡೂರು, ಜಗದೀಶ ಗೌಡ, ಬಸವರಾಜ ದೊಡ್ಮನಿ, ವೆಂಕಟೇಶ ಹೆಗಡೆ ಇದ್ದರು.