ಜೊಯಿಡಾ: ತಾಲ್ಲೂಕಿನಲ್ಲಿ ಶುಕ್ರವಾರವೂ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ತಾಲ್ಲೂಕಿನ ಚಾಂದವಾಡಿ, ಕಾತೇಲಿ, ನಾಗೋಡಾ ಹಾಗೂ ಕುಂಡಲ್ ಸೇತುವೆಗಳು ಮುಳುಗಡೆ ಆಗಿ ಜನ ಸಂಚಾರ ಸಂಪೂರ್ಣ ಕಡಿತಗೊಂಡಿದೆ.
ಜೊಯಿಡಾ– ದಾಂಡೇಲಿ ಮಾರ್ಗ ಮಧ್ಯದ ಬೈಲಪಾರದಲ್ಲಿ ರಾಜ್ಯ ಹೆದ್ದಾರಿಯ ಮೇಲೆ ರಭಸವಾಗಿ ನೀರು ಹರಿಯುತ್ತಿದೆ. ಕಾಳಿ ನದಿಯ ಉಪನದಿ ಪಾಂಡರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಚಾಂದವಾಡಿ, ಅಸು ಹಾಗೂ ಜಲಕಟ್ಟಿ ಗ್ರಾಮಗಳಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ.
ಕ್ಯಾಸಲ್ ರಾಕ್ನಲ್ಲಿಯೂ ಮನೆಗಳೂ ನೀರಿನಲ್ಲಿ ಮುಳುಗಿವೆ. ಕುಂಬಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾನೇರಿ ನದಿಯ ನೀರು, ಗದ್ದೆಗಳಿಗೆ ಬಂದು ಭತ್ತದ ಬೆಳೆ ನಾಶವಾಗಿ ಇಡೀ ಗದ್ದೆಯೇ ನದಿಯಂತಾಗಿದೆ.