ಶಿರಸಿ: ಕರ್ತವ್ಯದಲ್ಲಿದ್ದ ಬಂಗಾರಪೇಟೆ ತಹಶೀಲ್ದಾರರ ಹತ್ಯೆಯನ್ನು ಖಂಡಿಸಿ, ರಾಜ್ಯ ಸರ್ಕಾರಿ ನೌಕರರ ಸಂಘದ ಸ್ಥಳೀಯ ಘಟಕದ ಪ್ರಮುಖರು ಶನಿವಾರ ಇಲ್ಲಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು ಹಾಗೂ ನೌಕರರ ರಕ್ಷಣೆಗೆ ಕಠಿಣ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಕರ್ತವ್ಯನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಯುವ ಘಟನೆಗಳು ಅನೇಕ ಸಂದರ್ಭಗಳಲ್ಲಿ ನಡೆದಿವೆ. ಕಠಿಣ ಕಾನೂನು ಇಲ್ಲದ ಕಾರಣ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಸರ್ಕಾರ ತಕ್ಷಣ ಕಾನೂನು ರೂಪಿಸಲು ಮುಂದಾಗಬೇಕು. ಬಂಗಾರಪೇಟೆ ತಹಶೀಲ್ದಾರರ ಕೊಲೆ ನಡೆಸಿರುವ ಆರೋಪಿಯನ್ನು ಬಂಧಿಸಬೇಕು. ರಾಜ್ಯದಲ್ಲಿ ಸರ್ಕಾರಿ ನೌಕರರು ನಿರ್ಭೀತಿಯಿಂದ ಕೆಲಸ ಮಾಡಲು ಪೂರಕ ವಾತಾವರಣ ನಿರ್ಮಿಸಬೇಕು. ಮೃತರ ಕುಟುಂಬಕ್ಕೆ ಸರ್ಕಾರ ಗರಿಷ್ಠ ಪರಿಹಾರ ಒದಗಿಸಬೇಕು. ಮೃತರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಕೃಷ್ಣ ಕಾಮಕರ, ಪ್ರಧಾನ ಕಾರ್ಯದರ್ಶಿ ಅರುಣ ನಾಯ್ಕ, ರಾಜ್ಯ ಸಂಘದ ಸದಸ್ಯ ಮಹಮ್ಮದ್ ರಿಯಾಜ್, ಪ್ರಮುಖರಾದ ಸೀತಾರಾಮ ನಾಯ್ಕ, ನಾರಾಯಣ ನಾಯ್ಕ, ಕಿರಣ ನಾಯ್ಕ, ವಿದ್ಯಾ ಹಳದೀಪುರ, ಕಿರಣಕುಮಾರ್, ರಮೇಶ ಹೆಗಡೆ ಇದ್ದರು.