ಕಾರವಾರ:ನಗರದ ನಂದನಗದ್ದಾ ನಾಯ್ಕವಾಡಾದಲ್ಲಿ ಮರವೊಂದಕ್ಕೆ ಕಿಡಿಗೇಡಿಗಳು ಭಾನುವಾರ ಬೆಂಕಿ ಹಚ್ಚಿದ್ದಾರೆ. ಸುತ್ತಮುತ್ತ ತರಗೆಲೆಗಳು ಇದ್ದ ಕಾರಣ ಬೆಂಕಿ ಭಾರಿ ಪ್ರಮಾಣದಲ್ಲಿ ಉರಿದು ಮರವನ್ನು ಸುಟ್ಟಿತು.
ಗಾಳಿ ಬೀಸುತ್ತಿದ್ದ ಕಾರಣ ಬೆಂಕಿಹೊತ್ತಿಕೊಂಡ ತರಗೆಲೆಗಳು ಸುತ್ತಮುತ್ತ ಮನೆಗಳ ಮೇಲೆ ಬೀಳುವ ಆತಂಕ ಮೂಡಿತ್ತು. ಕೊನೆಗೇ ಸ್ಥಳೀಯರೇ ಸೇರಿಕೊಂಡು ಬೆಂಕಿ ನಂದಿಸಿದರು. ಸಮೀಪದಲ್ಲೇ ವಿದ್ಯುತ್ ತಂತಿಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಸ್ಕಾಂ ವಿದ್ಯುತ್ಪೂರೈಕೆ ಸ್ಥಗಿತಗೊಳಿಸಿತ್ತು.
ಈ ಪ್ರದೇಶದಲ್ಲಿ ಕಿಡಿಗೇಡಿಗಳಿಂದ ತೊಂದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.