ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆ ಭಾಗದ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಅವರು, ‘ರಾಜೀವನಗರದ ಸಿಟಿಎಸ್ 26–37ರಲ್ಲಿ ಪೌರಕಾರ್ಮಿಕರು ವಾಸವಾಗಿರುವ ಜಾಗವು ಕಂದಾಯ ಇಲಾಖೆಗೆ ಸೇರಿದೆ. ಕಳೆದ ಆರೇಳು ದಶಕಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ. ಕಾನೂನು ಜ್ಞಾನದ ಕೊರತೆಯಿಂದ ಅವರಿಗೆ ಪಟ್ಟಾ ಪಡೆಯುವ ಕಲ್ಪನೆ ಇರಲಿಲ್ಲ. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ಜಾರಿಗೆ ತಂದ 94ಸಿಸಿ ಕಾಯ್ದೆ ಅಡಿಯಲ್ಲಿ ಇಲ್ಲಿನ 35 ನಿವಾಸಿಗಳು ಪಟ್ಟಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆಗಿನ ತಹಶೀಲ್ದಾರರು ಇವರೆಲ್ಲರ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ’ ಎಂದರು.