ಅಂಕೋಲಾ: ಗಂಗಾವಳಿ ನದಿಯಲ್ಲಿ ಬಿದ್ದು ಮೂವರು ಸೋದರ ಸಂಬಂಧಿಗಳ ಸಾವು

ಅಂಕೋಲಾ: ತಾಲ್ಲೂಕಿನ ಹಿಲ್ಲೂರು ವ್ಯಾಪ್ತಿಯ ಕರಿಕಲ್ನಲ್ಲಿ ಭಾನುವಾರ, ಗಂಗಾವಳಿ ನದಿಯಲ್ಲಿ ಕೊಂಡಗ (ಚಿಪ್ಪೆಕಲ್ಲು ಮಾದರಿಯ ಜಲಚರ) ತೆಗೆಯಲು ಹೋಗಿದ್ದ ಮೂವರು ಸೋದರ ಸಂಬಂಧಿಗಳು ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಕರಿಕಲ್ನ ಪೂಜಾ ಮಹೇಶ ನಾಯ್ಕ (17), ಕುಮಟಾ ಅಘನಾಶಿನಿಯ ನಾಗೇಂದ್ರ ದಾಸು ನಾಯ್ಕ (16) ಮತ್ತು ಕುಮಟಾ ಕೋನಳ್ಳಿಯ ದಿಲೀಪ್ ಬಾಬು ನಾಯ್ಕ (20) ಮೃತರು. ಪೂಜಾ, ಕುಮಟಾದ ನೆಲ್ಲಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಗಷ್ಟೇ ಪ್ರಥಮ ಪಿ.ಯು.ಸಿ ಅಧ್ಯಯನ ಪೂರ್ಣಗೊಳಿಸಿದ್ದಳು. ಕೋನಳ್ಳಿಯ ದಿಲೀಪ್ ಅವರ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಬೇಸಿಗೆ ರಜೆಯ ನಿಮಿತ್ತ ಮನೆಗೆ ಬಂದಿದ್ದಳು.
ಭಾನುವಾರ ಬೆಳಿಗ್ಗೆ ಪೂಜಾಳ ಮನೆಗೆ ಬಂದಿದ್ದ ಮಾವನ ಮಗ ನಾಗೇಂದ್ರ ಮತ್ತು ದೊಡ್ಡಮ್ಮನ ಮಗ ದಿಲೀಪ್ ಜೊತೆಗೂಡಿ ಸಮೀಪದ ಗಂಗಾವಳಿ ನದಿಯಲ್ಲಿ ಕೊಂಡಗ ಆರಿಸಲು ಮಧ್ಯಾಹ್ನ ತೆರಳಿದ್ದರು. ಈ ವೇಳೆ ಪೂಜಾ ಕಾಲು ಜಾರಿ ಬಿದ್ದಿದ್ದು, ಅವಳನ್ನು ಕಾಪಾಡಲು ಹೋದ ಉಳಿದ ಇಬ್ಬರೂ ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಮೂವರ ಮೃತದೇಹಗಳು ದೊರಕಿವೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ–ನದಿ ಪುನರುಜ್ಜೀವನಕ್ಕೆ ಅರಣ್ಯೀಕರಣ: ಡಾ. ಎಚ್.ಆರ್.ಕೃಷ್ಣಮೂರ್ತಿ ಲೇಖನ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.