ಕಾರವಾರ: ನಗರದಲ್ಲಿ ಸತತವಾಗಿ ಸ್ವಚ್ಛತಾ ಅಭಿಯಾನ ನಡೆಸಿಕೊಂಡು ಬಂದಿರುವ ‘ಪಹರೆ ಅಭಿಯಾನ’ವು 300ನೇ ವಾರ ಪೂರೈಸಿದೆ. ಶನಿವಾರ ಬೆಳಿಗ್ಗೆ ಸೇಂಟ್ ಜೋಸೆಫ್ ಶಾಲೆಯ ಮುಂದಿನಿಂದ ಸ್ವಚ್ಛತೆ ಆರಂಭಿಸಿ ಕಾಜುಭಾಗ ಬಳಿ ವಾರದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ, ಆಕಾಶವಾಣಿಯ ಹಿರಿಯ ಉದ್ಘೋಷಕಿ ಫ್ಲೋರಿನ್ ರೋಚ್, ಮುಖಂಡರಾದ ಎಲಿಷಾ ಎಲಕಪಾಟಿ, ಮನೋಜ ಭಟ್ ಮತ್ತು ಸದಾನಂದ ಮಾಂಜ್ರೇಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇವೇಳೆ ಮಾತನಾಡಿದ ವಕೀಲ ನಾಗರಾಜ ನಾಯಕ, ‘ನಗರಕ್ಕೆ ಆಹಾರ ಪದಾರ್ಥ ಮತ್ತು ತರಕಾರಿಗಳನ್ನು ಬೇರೆ ಕಡೆಯಿಂದ ತರಬೇಕಿದೆ. ಅದರ ಬದಲು ನಗರವಾಸಿಗಳು ತಮ್ಮ ಮನೆಗಳ ಚಾವಣಿಯಲ್ಲಿ ಕುಂಡಗಳಲ್ಲಿ ತರಕಾರಿಗಳನ್ನು ಬೆಳೆಯಬಹುದು. ಈ ದೇಶದ ಆಹಾರ ಕಣಜಕ್ಕೆ ನೆರವಾಗಬಹುದು. ಒಂದು ಚದರ ಮೀಟರ್ ಜಾಗದಲ್ಲಿ ಕನಿಷ್ಠ 25 ಕೆ.ಜಿ ತರಕಾರಿ ಬೆಳೆಯನ್ನು ಪ್ರತಿವರ್ಷ ಪಡೆಯಬಹುದು. ಪಹರೆ ವೇದಿಕೆಯು ಈ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ’ ಎಂದು ತಿಳಿಸಿದರು.