ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ರೈತರಿಗೆ ಆದಾಯದ ಸಿಹಿ ತಂದ ಹಲಸು

ಶಿರಸಿ ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿ 2,500 ಟನ್ ಹಲಸು ಇಳುವರಿ
Published 7 ಮೇ 2024, 4:57 IST
Last Updated 7 ಮೇ 2024, 4:57 IST
ಅಕ್ಷರ ಗಾತ್ರ

ಶಿರಸಿ: ಹೆಚ್ಚಿನ ಶ್ರಮ ಬೇಡದೆ ನೈಸರ್ಗಿಕವಾಗಿ ಬೆಳೆಯುವ ಹಲಸು ಬರಗಾಲದ ಸಂದರ್ಭದಲ್ಲಿಯೂ ಸಮೃದ್ಧವಾಗಿದ್ದು, ಕೃಷಿಕರಿಗೆ ಆದಾಯದ ಸಿಹಿ ನೀಡುವ ಮೂಲವಾಗಿದೆ.

ಕಳೆದ ವರ್ಷ ಮಳೆ ಕೊರತೆಯ ಕಾರಣಕ್ಕೆ ತಾಲ್ಲೂಕಿನೆಲ್ಲೆಡೆ ಬರ ವ್ಯಾಪಿಸಿದೆ. ಕೃಷಿ, ತೋಟಗಾರಿಕಾ ಬೆಳೆಗಳು ಒಣಗಿ ರೈತರನ್ನು ನಷ್ಟದ ಕೂಪಕ್ಕೆ ತಳ್ಳಿವೆ. ಆದರೆ ರೈತರ ಜಮೀನುಗಳ ಬೇಲಿಯ ಅಂಚು, ಬೆಟ್ಟ, ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಬಿಟ್ಟಿರುವ ಹಲಸಿಗೆ ಬರಗಾಲದ ಸಂದರ್ಭದಲ್ಲಿ ಉತ್ತಮ ದರ ಲಭಿಸುತ್ತಿದ್ದು, ಹಲವು ರೈತರಿಗೆ ಆದಾಯ ತರುತ್ತಿದೆ. 

ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿ 2,500 ಟನ್ ಹಲಸು ಇಳುವರಿಯಿದೆ. ಇದರಲ್ಲಿ ಶೇ50ರಷ್ಟು ಕೊಳೆತು ನೆಲ ಸೇರುತ್ತಿವೆ. ಕೆಲವು ರೈತರು ಸಂಘ, ಸಂಸ್ಥೆಗಳಿಗೆ ಕಾಯಿ ಮಾರುತ್ತಾರೆ. ಉಳಿದವನ್ನು ರೈತರು ಹಪ್ಪಳ, ಸಂಡಿಗೆ ಮಾಡಿ ಮೌಲ್ಯವರ್ಧನೆ ಮಾಡುತ್ತಾರೆ. 
ಪ್ರಸಕ್ತ ವರ್ಷ ಉಳಿದೆಲ್ಲ ಬೆಳೆಗಳು ಕೈಕೊಟ್ಟ ಪರಿಣಾಮ ಆದಾಯದ ಉದ್ದೇಶದಿಂದ  ಮೌಲ್ಯವರ್ಧನೆಯ ನಂತರ ಉಳಿಯುವ ಬಹುತೇಕ ಕಾಯಿಗಳನ್ನು ರೈತರು ವ್ಯಾಪಾರಿಗಳು, ಗೃಹೋದ್ಯಮಿಗಳಿಗೆ ನೇರವಾಗಿ ಮಾರುತ್ತಿದ್ದಾರೆ. ಇದರಿಂದ ಉಪ ಆದಾಯ ಗಳಿಸುತ್ತಿದ್ದಾರೆ. 

‘ಪ್ರಸಕ್ತ ಸಾಲಿನಲ್ಲಿ ಇಲ್ಲಿನ  ಕದಂಬ ಸಂಸ್ಥೆಯು ಹಲಸಿನ ಗುಜ್ಜೆ (ಎಳೆಯ ಕಾಯಿ) ಖರೀದಿ ಕೈಬಿಟ್ಟಿದೆ. ಬಲಿತ ಹಲಸು ಕಾಯಿಗಳಿದ್ದರೆ ಆಯಾ ಬೆಳೆಗಾರರ ಜತೆ ಗೃಹೋದ್ಯಮಿಗಳಿಗೆ ಸಂಪರ್ಕ ಮಾಡಿಸಿ, ಅವರು ತಯಾರಿಸುವ ಉತ್ಪನ್ನಗಳನ್ನು ಖರೀದಿಸುತ್ತಿದೆ. ಹೀಗಾಗಿ ವ್ಯಾಪಾರಿಗಳು, ಗೃಹೋದ್ಯಮಿಗಳು ನೇರವಾಗಿ ರೈತರ ಜಮೀನಿಗೆ ತೆರಳಿ ಹಲಸು ಖರೀದಿಸುತ್ತಿದ್ದಾರೆ. ಮನೆ ಬಾಗಿಲಲ್ಲಿ ಪ್ರತಿ ಕಾಯಿಗೆ ₹30ರಿಂದ ₹40 ದರ ಲಭ್ಯವಾಗುತ್ತಿದೆ’ ಎಂಬುದು ಶಿರಸಿಯ ರೈತ ಸತ್ಯನಾರಾಯಣ ಹೆಗಡೆ ಅಭಿಪ್ರಾಯ. 

ಕೆಲ ರೈತರು ನಗರದ ಹೆದ್ದಾರಿಯಲ್ಲಿ ನೇರವಾಗಿ ವ್ಯಾಪಾರ ಮಾಡುತ್ತಿದ್ದಾರೆ. ವಾಹನ ಸವಾರರು, ಚಾಲಕರು, ಪ್ರವಾಸಿಗರನ್ನು ಈ ಹಲಸು ಆಕರ್ಷಿಸುತ್ತಿದೆ. ಹೊರ ಊರಿನ ಪ್ರವಾಸಿಗರು ಹಲಸು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. 

‘ದಿನಕ್ಕೆ ಸುಮಾರು ಮೂರು ಕ್ವಿಂಟಲ್‌ಗೂ ಹೆಚ್ಚು ಹಲಸು ಮಾರಾಟವಾಗುತ್ತಿವೆ. ಮಾರುಕಟ್ಟೆಗೆ ಒಂದು ಬಾರಿಗೆ 8 ರಿಂದ 10 ಕ್ವಿಂಟಲ್‌ ಹಲಸಿನ ಹಣ್ಣನ್ನು ತಂದರೆ, 2 ರಿಂದ 3 ದಿನಗಳಲ್ಲಿ ಮಾರಾಟಗೊಳ್ಳುತ್ತವೆ. ಹಣ್ಣಿನ ಗಾತ್ರಕ್ಕೆ ಅನುಗುಣವಾಗಿ ₹100 ರಿಂದ ₹250ರ ತನಕ ಬೆಲೆ ಇದೆ’ ಎನ್ನುತ್ತಾರೆ ರೈತ ವ್ಯಾಪಾರಸ್ಥ ಬಾಲಚಂದ್ರ ನಾಯ್ಕ. 

ಹಲಸಿಗೆ ಹೊರ ರಾಜ್ಯಗಳಲ್ಲಿ ಬೇಡಿಕೆ ಸಾಕಷ್ಟಿದೆ. ಆದರೆ ಪ್ರಸಕ್ತ ಸಾಲಿನ ತಾಪಮಾನದಿಂದ ಸಾಗಾಟ ಸಮಸ್ಯೆ. ಹೀಗಾಗಿ ಗುಜ್ಜೆ ರಪ್ತು ಕೈಬಿಡಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಬಲಿತ ಹಲಸಿನ ಕಾಯಿಗಳು ಹೇರಳವಾಗಿ ಕಾಣುತ್ತಿವೆ
ವಿಶ್ವೇಶ್ವರ ಭಟ್ ಕದಂಬ ಸಂಸ್ಥೆ ಪ್ರಮುಖ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT