ಕಾರವಾರ: ತಾಲ್ಲೂಕಿನ ಚೆಂಡಿಯಾದ ಒಕ್ಕಲಕೇರಿಯಲ್ಲಿ ಸ್ಥಳೀಯ ಗುಡೇದೇವ ಬಾಲಭಕ್ತ ಮಂಡಳಿ ವತಿಯಿಂದ ಶನಿವಾರ ರಾತ್ರಿ ಪ್ರದರ್ಶಿಸಲ್ಪಟ್ಟ ‘ಜಲಂಧರ ಕಾಳಗ’ ಯಕ್ಷಗಾನ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ವಿವಿಧ ಸನ್ನಿವೇಶಗಳು 9 ವೇದಿಕೆಗಳಲ್ಲಿ ಪ್ರದರ್ಶನಗೊಂಡಿದ್ದು ವಿಶೇಷವಾಗಿತ್ತು.
ಗ್ರಾಮದ ಯುವಕರೇ ಸೇರಿ ಸ್ವಂತ ವೆಚ್ಚದಲ್ಲಿ ನಿರ್ಮಿಸಿದ್ದ ಅದ್ದೂರಿ ವೇದಿಕೆಯಲ್ಲಿ 16ಕ್ಕೂ ಹೆಚ್ಚು ಕಲಾವಿದರು ಸುಮಾರು ಆರು ತಾಸಿಗೂ ಹೆಚ್ಚು ಕಾಲ ಯಕ್ಷಗಾನ ಪ್ರದರ್ಶಿಸಿದರು. ಪ್ರಸಂಗದಲ್ಲಿ ಬರುವ ವಿವಿಧ ಲೋಕಗಳ ದೃಶ್ಯಾವಳಿ, ಯುದ್ಧ ಸನ್ನಿವೇಶಗಳನ್ನು ಅದ್ದೂರಿಯಾಗಿ ಪ್ರದರ್ಶಿಸಲಾಯಿತು.
ಶಿರ್ವೆ ಗ್ರಾಮದ ಬಾಳಾ ಗೌಡ ಭಾಗವತರಾಗಿ, ಜಲಂಧರನಾಗಿ ವಿಶ್ವ ಗೌಡ, ವೃಂದೆಯಾಗಿ ಶಿವಾನಂದ ಗೌಡ ಸೇರಿದಂತೆ ಗ್ರಾಮದ ಯುವಕರೇ ವಿವಿಧ ಪಾತ್ರದಲ್ಲಿ ಅಭಿನಯಿಸಿದರು.