ಗೋಕರ್ಣದಲ್ಲಿ ನೀರಿಲ್ಲದೆ ಬರಿದಾದ ರಾಮ ತೀರ್ಥವನ್ನು ಭಕ್ತರು ವೀಕ್ಷಿಸಿದರು
ಶಿರಸಿಯ ಬಿಸಲಕೊಪ್ಪ ಗ್ರಾಮ ಪಂಚಾಯಿತಿಯ ಉಲ್ಲಾಳದಲ್ಲಿ ಕೆರೆ ಬತ್ತಿರುವುದು
ಜೊಯಿಡಾ ತಾಲ್ಲೂಕಿನಲ್ಲಿ ಹರಿಯುವ ಕಾಳಿನದಿಯ ಉಪನದಿ ‘ಕಾನೇರಿ’ಯಲ್ಲಿ ನೀರಿನ ಮಟ್ಟ ವಿಪರೀತ ಇಳಿಕೆಯಾಗಿದೆ

ಅಸಮರ್ಪಕ ಕುಡಿಯುವ ನೀರಿನ ಯೋಜನೆಯಿಂದ ಮುಂಡಗೋಡ ಪಟ್ಟಣದ ವಿವಿಧ ಬಡಾವಣೆಯ ನಿವಾಸಿಗಳು ನೀರಿನ ತೊಂದರೆ ಅನುಭವಿಸುತ್ತಿದ್ದಾರೆ
– ಮಂಜುನಾಥ ಸ್ಥಳೀಯ.
ನೀರು ಸರಾಸರಿ 2 ಕಿ.ಮೀ. ದೂರ ಮಣ್ಣಿನ ಕಾಲುವೆಯಲ್ಲಿ ಹರಿದು ಬರಬೇಕಾದುದರಿಂದ ಬಹಳಷ್ಷು ನೀರು ಮಣ್ಣಿನಲ್ಲಿ ಇಂಗಿ ಹೋಗುತ್ತದೆ. ತೋಟಗಳಿಗೆ ನೀರುಣಿಸುವುದು ಸವಾಲಾಗಿದೆ
–ಕಮಲಾಕರ ಭಾಗ್ವತ ಬಾಗಿನಕಟ್ಟಾ ಕೃಷಿಕ.
ದಾಂಡೇಲಿಯ ಕಲಿಂಪಾಲಿ ಗ್ರಾಮಕ್ಕೆ ನೀರು ಸರಬರಾಜು ಮಾಡಲು ವ್ಯವಸ್ಥೆಯಾಗಲಿ. ಶುದ್ಧ ಕುಡಿಯುವ ನೀರಿನ ಸಮಸ್ಯೆ ಹಲವೆಡೆ ಇದೆ
–ಜಾನು ತಾಟೆ ಕೃಷಿಕ.
ನೀರು ಸಂಗ್ರಹಣೆ ಕಡಿಮೆ ಇರುವ ಸ್ಥಳಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಶೀಘ್ರವೇ ಜೆಜೆಎಂನಲ್ಲಿ ಸಂಪರ್ಕದ ಕುರಿತು ಕ್ರಮ ಕೈಗೊಳ್ಳಲಾಗುವುದು
–ರಾಜೀವ ನಾಯ್ಕ ಗ್ರಾಮೀಣ ಕುಡಿಯುವ ನೀರು ನೈರ್ಮ್ಯಲ್ಯ ಇಲಾಖೆಯ ಇಇ.ಬರಿದಾದ ರಾಮತೀರ್ಥ
ಗೋಕರ್ಣದಲ್ಲಿ ಫೆಬ್ರುವರಿ ಪ್ರಾರಂಭದಿಂದಲೇ ನೀರಿನ ಕೊರತೆ ಕಾಣಿಸುತ್ತಿದೆ. ಜನರ ಜೀವನಾಡಿಯಾದ ಸಮುದ್ರದ ತಪ್ಪಲಿನಲ್ಲಿರುವ ರಾಮತೀರ್ಥ (ರಾಮಾ ವಾಟರ್) ಬರಿದಾಗಿದೆ. ಮಳೆಯ ಅಭಾವದಿಂದಾಗಿ ಈ ಭಾಗದ ಬಹುತೇಕ ಕಡೆ ಈಗಿನಿಂದಲೇ ನೀರಿನ ಸಮಸ್ಯೆ ತಲೆದೋರಿದೆ. ಜೆಜೆಎಂ ಯೋಜನೆ ಅನಷ್ಠಾನಗೊಂಡಿದ್ದರೂ ನೀರು ಸರಬರಾಜು ಆಗುತ್ತಿಲ್ಲ ಎಂಬ ದೂರುಗಳಿವೆ. ಮುಖ್ಯ ಸಮುದ್ರ ದಂಡೆಯಲ್ಲಿರುವ ರಾಮತೀರ್ಥದ ನೀರು ಕುಡಿಯಲು ಉಪಯುಕ್ತವಾಗಿದ್ದು ಸಾವಿರಾರು ಜನರಿಗೆ ಆಸರೆಯಾಗಿತ್ತು. ಆದರೆ ರಾಮತೀರ್ಥದ ಸುತ್ತಮುತ್ತ ಕೊಳವೆಬಾವಿ ಕೊರೆಯಿಸುವವರ ಸಂಖ್ಯೆ ಹೆಚ್ಚಿರುವ ಕಾರಣ ನೀರಿನ ಮಟ್ಟ ಇಳಿಕೆಯಾಗಿದೆ. ‘ಪ್ರಕೃತಿದತ್ತ ರಾಮತೀರ್ಥದಲ್ಲಿ ನೈಸರ್ಗಿಕವಾಗಿ ಸಿಗುವ ಶುದ್ಧ ನೀರಾಗಿತ್ತು. ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ರಾಮತೀರ್ಥದಂತಹ ತಾಣವೂ ನೀರಿಲ್ಲದೆ ಒಣಗುತ್ತಿರುವುದನ್ನು ಕಂಡು ಬೇಸರವಾಗಿದೆ’ ಎಂದು ಜರ್ಮನ್ ಮಹಿಳೆ ಶೋಲಾ ಥ್ರಿಸ್ಕೋಲ್ ಹೇಳುತ್ತಾರೆ.