ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಗಾಗಿಯೇ ಇರುವ ವಿಶ್ವದ ಏಕೈಕ ವಿಶ್ವವಿದ್ಯಾಲಯ ‘ಹಂಪಿ ಕನ್ನಡ ವಿಶ್ವವಿದ್ಯಾಲಯ’

Published 30 ಸೆಪ್ಟೆಂಬರ್ 2023, 4:46 IST
Last Updated 30 ಸೆಪ್ಟೆಂಬರ್ 2023, 4:46 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಗತ್ತಿನಲ್ಲಿ ಸಾವಿರಾರು ವಿಶ್ವವಿದ್ಯಾಲಯಗಳಿವೆ. ಆದರೆ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾಲಯ ಎಂದರೆ ಅದು ಹಂಪಿಯ ಕನ್ನಡ ವಿಶ್ವವಿದ್ಯಾಲಯ.

686 ಎಕರೆ ಜಾಗವು ಬಹುತೇಕ ಗಿಡಗಂಟಿಗಳಿಂದ ಕೂಡಿತ್ತು. ಅಲ್ಲೊಂದು ವಿದ್ಯಾ ಸಂಕೀರ್ಣ 1990ರ ದಶಕದಲ್ಲಿ ಕಾಲಿಟ್ಟಿತ್ತು. ಹೀಗಾಗಿಯೇ ಇಡೀ ಕ್ಯಾಂಪಸ್‌ಗೆ ’ವಿದ್ಯಾರಣ್ಯ’ ಎಂಬ  ಹೆಸರು ಇಡಲಾಯಿತು. ಹಂಪಿ, ವಿಜಯನಗರದ ಇತಿಹಾಸದಲ್ಲಿ ವಿದ್ಯಾರಣ್ಯರದು ಮರೆಯಲಾಗದ ಛಾಪು. ಈ ಕಾರಣಕ್ಕೂ ಇರಬಹುದು, ವಿದ್ಯಾರಣ್ಯ ಹೆಸರಿನೊಂದಿಗೆ ಕಳೆದ 33 ವರ್ಷಗಳಿಂದ ಜ್ಞಾನಸುಧೆ ಹರಿಸುತ್ತಿದೆ; ಕನ್ನಡದ ಹೆಮ್ಮೆಯ ಜ್ಞಾನದೇಗುಲ.

ಕನ್ನಡ ವಿಶ್ವವಿದ್ಯಾಲಯಕ್ಕೆ ಭೌಗೋಳಿಕ ವ್ಯಾಪ್ತಿಯ ಕಟ್ಟುಪಾಡುಗಳಿಲ್ಲ. ಕನ್ನಡಿಗರು ಎಲ್ಲೆಲ್ಲಿ ನೆಲೆಸಿದ್ದಾರೋ, ಅಲ್ಲೆಲ್ಲ ವಿಶ್ವವಿದ್ಯಾಲಯ ಚಾಚಿಕೊಂಡಿದೆ. ವಿದ್ಯೆಯನ್ನು ಸೃಷ್ಟಿಸುವ, ಶೋಧಿಸುವ ವಿಶ್ವವಿದ್ಯಾಲಯವೇ ಹೊರತು ಕೇವಲ ಬೋಧಿಸುವುದಕ್ಕೆ ಇರುವ ಸಂಸ್ಥೆಯಲ್ಲ ಎಂಬುದೇ ಇದರ ಧ್ಯೇಯವಾಕ್ಯ. ಜಗತ್ತಿನ ಎಲ್ಲ ಜ್ಞಾನಗಳನ್ನು ವಿವರಿಸುವ ಶಕ್ತಿಯನ್ನು ತುಂಬಿ, ಕನ್ನಡ ಭಾಷೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹ ಸ್ಥಾನ ಕಲ್ಪಿಸಿಕೊಡುವುದು ಇದರ ಪರಮ ಲಕ್ಷ್ಯ. 

ಕನ್ನಡ ನಾಡು ನುಡಿ, ಭಾಷೆ, ಸಂಸ್ಕೃತಿ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳ ಸಂಶೋಧನೆ ಹಾಗೂ ಪ್ರಸರಣದಲ್ಲಿ ಕನ್ನಡ ವಿಶ್ವವಿದ್ಯಾಲಯ ನಿರತವಾಗಿದೆ. ಕನ್ನಡ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಬಗೆಗೆ ಬಹುಶಿಸ್ತೀಯ ಮತ್ತು ಅಂತರಶಿಸ್ತೀಯ ನೆಲೆಯ ಸಂಶೋಧನೆಗಳನ್ನು ಆಯೋಜಿಸಲಾಗುತ್ತಿದೆ. ಕನ್ನಡ ಭಾಷೆಯ ಮೂಲಕ ಜಗತ್ತಿನ ಜ್ಞಾನವನ್ನು ಕನ್ನಡಿಗರಿಗೆ ಪರಿಚಯಿಸುವ ಹಾಗೂ ಕನ್ನಡದ ಜ್ಞಾನವನ್ನು ಜಗತ್ತಿಗೆ ನೀಡುವ, ವಿಶ್ವಾತ್ಮಕತೆಗೆ ಬದ್ಧವಾಗಿ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಇದೊಂದು ವಿಶಿಷ್ಟ ವಿಶ್ವವಿದ್ಯಾಲಯ.

ಕನ್ನಡ ವಿಶ್ವವಿದ್ಯಾಲಯದ ಬಾಹು ರಾಜ್ಯದಾದ್ಯಂತ ಚಾಚಿಕೊಂಡಿದೆ. ಕುಪ್ಪಳಿ, ಬದಾಮಿ, ಬೆಳಗಾವಿ, ಕೂಡಲಸಂಗಮ, ದೇವದುರ್ಗ ಹಾಗೂ ಚಾಮರಾಜನಗರದ ಕುರುಬನಕಟ್ಟೆಗಳಲ್ಲಿ ವಿಸ್ತರಣಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಹಾಗೂ ಪ್ರಸಾರಾಂಗದ ಮಾರಾಟ ಮಳಿಗೆ ಇದೆ.

4 ವಿಷಯ, 24 ಅಧ್ಯಯನ ವಿಭಾಗ, 20 ಅಧ್ಯಯನ ಪೀಠ

ಸಂಸ್ಥಾಪಕ ಕುಲಪತಿ ಡಾ.ಚಂದ್ರಶೇಖರ ಕಂಬಾರ ಅವರು ಕನ್ನಡಿಗರ ಕನಸಿನ ವಿಶ್ವವಿದ್ಯಾಲಯಕ್ಕೆ ಹಾಕಿದಂತಹ ಬುನಾದಿ ಬಹಳ ಭದ್ರ. 1991ರಲ್ಲಿ ವಿಶ್ವವಿದ್ಯಾಲಯ ಆರಂಭವಾದಾಗ ಇದ್ದ ನಾಲ್ಕು ವಿಷಯಗಳು (ನಿಕಾಯ) ಈಗಲೂ ಇವೆ. ಅವುಗಳೆಂದರ ಭಾಷೆ, ಸಮಾಜ ವಿಜ್ಞಾನ, ಲಲಿತಕಲೆ ಮತ್ತು ವಿಜ್ಞಾನ. ಇವುಗಳು ಈ 32 ವರ್ಷಗಳಲ್ಲಿ ಬಹಳ ವಿಸ್ತಾರವಾಗಿ ಬೆಳೆದಿದ್ದು, 24 ಅಧ್ಯಯನ ವಿಭಾಗಗಳು ಹಾಗೂ 20 ಅಧ್ಯಯನ ಪೀಠಗಳು ಸ್ಥಾಪನೆಗೊಂಡಿವೆ. 

ಕೋರ್ಸ್‌ಗಳು:  

ಸ್ನಾತಕ ಪದವಿ: ಬಿಪಿಎ, ಬಿವಿಎ

ಸ್ನಾತಕೋತ್ತರ: ಎಂ.ಎ ಪಿಎಚ್‌ಡಿ ಸಂಯೋಜಿತ ಪದವಿ (ಕನ್ನಡ ಸಾಹಿತ್ಯ), ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (ಎಂಜೆಎಂಸಿ), ಮಹಿಳಾ ಅಧ್ಯಯನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ಯೋಗ ಅಧ್ಯಯನ, ಪಿಎಚ್‌ಡಿ, ಡಿ.ಲಿಟ್‌ ಜತೆಗೆ ವಿವಿಧ ಸರ್ಟಿಫಿಕೇಟ್  ಮತ್ತು ಡಿಪ್ಲೊಮಾ ಕೋರ್ಸ್‌ಗಳು

ಗ್ರಂಥಗಳ ಪ್ರಕಟಣೆ

ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ಇಡೀ ನಾಡಿನಲ್ಲಿಯೇ ಪ್ರಕಟಣೆಯಲ್ಲಿ ಮುಂಚೂಣಿಯಲ್ಲಿದೆ. ಇದುವರೆಗೆ 2 ಸಾವಿರಕ್ಕೂ ಅಧಿಕ ಗ್ರಂಥಗಳನ್ನು ಪ್ರಕಟಿಸಲಾಗಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವಕೋಶಗಳನ್ನು ಹೊರತರಲಾಗಿದೆ. ಕರ್ನಾಟಕ ಚರಿತ್ರೆಯ ಹಲವು ಸಂಪುಟಗಳು ಪ್ರಕಟಗೊಂಡಿವೆ. ರಾಜ್ಯದಲ್ಲಿರುವ ಸಂಪದ್ಭರಿತವಾದ ಶಾಸನಗಳನ್ನು ಸಂಗ್ರಹಿಸಿ, ಶಾಸನ ಸಂಪುಟಗಳನ್ನು ಹೊರತರಲಾಗಿದೆ. 20 ಸಂಪುಟಗಳಲ್ಲಿ ಜೈನ ಸಾಹಿತ್ಯವನ್ನು ಸಂಪಾದಿಸಿ ಪ್ರಕಟಿಸಲಾಗಿದೆ.

ವಿಶ್ವವಿದ್ಯಾಲಯದ ‘ಅಕ್ಷರ’ ಗ್ರಂಥಾಲಯ ಇನ್ನೊಂದು ಅದ್ಭುತ. ಇಲ್ಲಿ 2.41 ಲಕ್ಷದಷ್ಟು ಅಮೂಲ್ಯ ಗ್ರಂಥಗಳಿವೆ. ಎಲ್ಲಾ ಭಾಷೆಗಳ ಅಪರೂಪದ ಗ್ರಂಥಗಳೂ ಇಲ್ಲಿವೆ. ಗ್ರಂಥಾಲಯದ ಪ್ರತಿಯೊಂದು ವಿಭಾಗಕ್ಕೂ ಇಂಟರ್‌ನೆಟ್‌ ಕಂಪ್ಯೂಟರ್‌ ಟೆಕ್ನಾಲಜಿ (ಐಸಿಟಿ) ಸೌಲಭ್ಯ ಒದಗಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕೆ ವಿಶೇಷ ಕಂಪ್ಯೂಟರ್‌ ಕೇಂದ್ರ ಸಿದ್ಧಗೊಳಿಸಲಾಗಿದೆ.

ಕೊರತೆಗಳು ಸಾಕಷ್ಟಿವೆ

ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಉದ್ದೇಶ ತಿಳಿದಿದ್ದೇ ಆದರೆ ಇದೊಂದು ಹೆಮ್ಮೆಯ, ಕನ್ನಡ ಭಾಷಿಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ, ಕನ್ನಡ ಕಲಿತರೆ ಉದ್ಯೋಗ ನಿಶ್ಚಿತ ಎಂದು ಎದೆಮುಟ್ಟಿ ಹೇಳಿಕೊಳ್ಳುವಂತಹ ಸಂಸ್ಥೆಯಾಗಿ ಮಾರ್ಪಡಬೇಕಿತ್ತು ಮತ್ತು ಈ 32 ವರ್ಷಗಳಲ್ಲಿ ಆ ಛಾಪನ್ನು ಭದ್ರವಾಗಿ ಒತ್ತಬೇಕಿತ್ತು. ಆದರೆ ಸರ್ಕಾರಕ್ಕೆ ಮಾತ್ರ ಅನುದಾನ, ಸೌಲಭ್ಯ, ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಕನ್ನಡ ವಿಶ್ವವಿದ್ಯಾಲಯವು ಹತ್ತರೊಂದಿಗೆ ಇನ್ನೊಂದು ಎಂಬಂತಹ ಧೋರಣೆ ಇದೆ. ಹೀಗಾಗಿ ವಿಶೇಷ ವಿಶ್ವವಿದ್ಯಾಲಯ ಸ್ಥಾಪನೆಗೊಂಡ ವಿಶೇಷ ಉದ್ದೇಶ ಅಷ್ಟು ಸಲೀಸಾಗಿ ಈಡೇರುತ್ತಿಲ್ಲ ಎಂದೇ ಹೇಳಬೇಕು. 

2022–23ನೇ ಸಾಲಿನ ಅಂತ್ಯದ ಸ್ಥಿತಿಗತಿ ನೋಡಿಕೊಂಡು ಹೇಳುವುದಾದರೆ, 73 ಬೋಧಕ ಮತ್ತು 234 ಬೋಧಕೇತರ ಸೇರಿದಂತೆ ಒಟ್ಟು 307 ಹುದ್ದೆಗಳು ಸರ್ಕಾರದಿಂದ ಮಂಜೂರಾಗಿದೆ. ಬೋಧಕ ಹುದ್ದೆಗಳ ಪೈಕಿ 44 ಹುದ್ದೆ ಮಾತ್ರ ಭರ್ತಿಯಾಗಿದ್ದು, 29 ಹುದ್ದೆಗಳು ಖಾಲಿ ಇವೆ. 36 ಬೋಧಕೇತರ ‘ಡಿ’ ದರ್ಜೆ /ವಾಹನ ಚಾಲಕ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದ ನಿರ್ಬಂಧ ಇರುವ ಕಾರಣ ಅದು ಭರ್ತಿಯಾಗಿಯೇ ಇಲ್ಲ. 

ಈ ಮೇಲೆ ತಿಳಿಸಿದ 307 ಹುದ್ದೆಗಳು ಮಂಜೂರಾಗಿರುವುದು 2003ರಲ್ಲಿ! ಅಲ್ಲಿಂದೀಚೆಗೆ ಹೊಸ ಹುದ್ದೆಗಳ ಸೃಜನೆ ಅಥವಾ ಮಂಜೂರಾತಿ ಆಗಿಯೇ ಇಲ್ಲ. ಸರ್ಕಾರದ ಮಂಜೂರಾತಿ ದೊರೆತ ಕಾರಣ ದೂರಶಿಕ್ಷಣ ಕೇಂದ್ರ ಆರಂಭವಾಯಿತು. 9 ಕೋರ್ಸ್‌ಗಳಿಗೆ ವಾರ್ಷಿಕವಾಗಿ 1,260 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಇವರ ನಿರ್ವಹಣೆಗೆ ತಾತ್ಕಾಲಿಕ ಸಿಬ್ಬಂದಿಯನ್ನಷ್ಟೇ ನಿಯೋಜಿಸಬೇಕಾಗುತ್ತಿದೆ. ದೃಶ್ಯಕಲೆ, ಸಂಗೀತ, ನೃತ್ಯ ಕೋರ್ಸ್‌ಗಳ 96 ವಿದ್ಯಾರ್ಥಿಗಳ ಬೋಧನೆಗೆ ಸಹ ಇರುವುದು ತಾತ್ಕಾಲಿಕ ಉಪನ್ಯಾಸಕರೇ. ವಿಸ್ತರಣಾ ಕೇಂದ್ರಗಳಲ್ಲಿನಲ್ಲಿನ ವಸ್ತುಸಂಗ್ರಹಾಲಯಗಳಲ್ಲಿ ಕಾಯಂ ಸಿಬ್ಬಂದಿ ಇಲ್ಲ. ಒಟ್ಟಾರೆಯಾಗಿ 103 ತಾತ್ಕಾಲಿಕ ಸಿಬ್ಬಂದಿಯಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ವಿಶ್ವವಿದ್ಯಾಲಯ ಸ್ಥಾಪನೆಗೊಂಡ ಉದ್ದೇಶವನ್ನು ಈಡೇರಿಸುವಲ್ಲಿ ದೊಡ್ಡ ಹೊಣೆಯನ್ನು ಈ ತಾತ್ಕಾಲಿಕ ಸಿಬ್ಬಂದಿ ಹೊತ್ತುಕೊಂಡಿದ್ದಾರೆ ಎಂಬುದನ್ನು ಉಲ್ಲೇಖಿಸಬೇಕಿದೆ. 

ವಿಶ್ವವಿದ್ಯಾಲಯಗಳಲ್ಲಿ ಹಗರಣಗಳು ಸಹಜ ಎಂಬಂತಾಗಿದೆ. ಕನ್ನಡಿಗರ ಹೆಮ್ಮೆ ಎನಿಸಿದ ಮಹಾನ್‌ ಸಂಸ್ಥೆಯಲ್ಲೂ  ಹಗರಣಗಳು ನಡೆದಾಗ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಬಯಲಿಗೆ ಬಂದ ಹಗರಣಗಳು ತನಿಖೆಯ ಹಂತದಲ್ಲಿವೆ. ಅದೇ ಕಾರಣಕ್ಕೋ ಏನೋ, ವಿಶ್ವವಿದ್ಯಾಲಯಕ್ಕೆ ಬರಬೇಕಾದ ಅನುದಾನವೇ ಕಡಿತಗೊಂಡಿದ್ದು, ವಿದ್ಯುತ್‌ ಬಿಲ್‌ ಕಟ್ಟಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಹೀಗಿದ್ದರೂ ಕನ್ನಡಿಗರ ಹೆಮ್ಮೆಯ ಸಂಸ್ಥೆ ತಲೆ ತಗ್ಗಿಸಬಾರದು, ಅದು ಎದೆಯುಬ್ಬಿಸಿ ರಾಜ ಗಾಂಭೀರ್ಯದಲ್ಲಿ ಮುನ್ನಡೆಯುತ್ತಲೇ ಇರಬೇಕು ಎಂಬುದು ಆರೂವರೆ ಕೋಟಿ ಕನ್ನಡಿಗರ ಬಯಕೆ.

ಮಹತ್ವದ ಸಾಧನೆಗಳು

ಕನ್ನಡ ವಿಶ್ವವಿದ್ಯಾಲಯ ಮೂರು ದಶಕಗಳಲ್ಲಿ ಹಲವಾರು ಸಾಧನೆಯ ಮೆಟ್ಟಿಲುಗಳನ್ನು ಏರಿದೆ. ಪ್ರಸಾರಾಂಗದಿಂದ 2 ಸಾವಿರಕ್ಕೂ ಅಧಿಕ ಗ್ರಂಥ ಪ್ರಕಟಿಸಿದ್ದು ಸಣ್ಣ ಕೆಲಸವೇನಲ್ಲ. ಜತೆಗೆ ವೈದ್ಯ ವಿಶ್ವಕೋಶ ಗ್ರಾಮಗಳ ದತ್ತು ಯೋಜನೆ ಹಾಗೂ ವಿದೇಶಗಳಲ್ಲೂ ಕನ್ನಡ ಕಲಿಸುವ ಸಂಘಟನೆಗಳ ಜತೆಗೆ ಕೈಜೋಡಿಸಿರುವುದು ವಿಶ್ವವಿದ್ಯಾಲಯದ ನಾಡು ನುಡಿಯ ಬಗೆಗಿನ  ಅಚಲ ಪ್ರೀತಿಯ ದ್ಯೋತಕಗಳು ವೈದ್ಯ ವಿಶ್ವಕೋಶ ಭಾರತೀಯ ಭಾಷೆಗಳಲ್ಲಿಯೇ ವರ್ಣಚಿತ್ರಗಳೊಂದಿಗೆ ಸಮಗ್ರ ಮಾಹಿತಿ ಒಳಗೊಂಡ ಅಪರೂಪದ ಮೊದಲ ವೈದ್ಯಕೀಯ ಕೃತಿ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದೆ. ಜೀವದ ಉಗಮ ಮತ್ತು ಬೆಳವಣಿಗೆ ದೇಹದ ರಚನೆ ಮತ್ತು ಅದರ ವಿವಿಧ ಅಂಗಗಳ ಕಾರ್ಯವಿಧಾನ ಹಾಗೂ ರೋಗ ರುಜಿನಗಳ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡು  ಈ ಕೃತಿಯನ್ನು ರಚಿಸಲಾಗಿದೆ. ಹೆಸರಾಂತ ವೈದ್ಯ ಡಾ.ಪಿ.ಎಸ್.ಶಂಕರ್ ಅವರ ಪ್ರಧಾನ ಸಂಪಾದಕತ್ವದಲ್ಲಿ ಇತರ 12 ಮಂದಿ ಪ್ರತಿಭಾವಂತ ವೈದ್ಯರು ಕೈಜೋಡಿಸಿ ರಚನೆಯಾದಂತಹ ಮಹತ್ವದ ವಿಶ್ವಕೋಶ ಇದು. ಕನ್ನಡ ವಿಶ್ವವಿದ್ಯಾಲಯ ಸುತ್ತಮುತ್ತಲಿನ ಐದು ಗ್ರಾಮಗಳಾದ ಇಂಗಳಗಿ ಪಾಪಿನಾಯಕನಹಳ್ಳಿ ಕಡ್ಡಿರಾಂಪುರ ಮಲಪನಗುಡಿ ಹಾಗೂ ಸೀತಾರಾಮ ತಾಂಡಾಗಳನ್ನು ದತ್ತು ಪಡೆದಿರುವುದು ಈ ಸಂಸ್ಥೆಗೆ ಇರುವ ಸಮುದಾಯ ಕಾಳಜಿಯ ದ್ಯೋತಕ.

ಜ್ಞಾನಶಾಖೆಗಳ ಅಂತರ್‌ಸಂಬಂಧ ಹುಡುಕಲು ಪ್ರಯತ್ನ

ಕನ್ನಡ ವಿಶ್ವವಿದ್ಯಾಲಯವು ಕನ್ನಡ ಜನತೆಯ ಅಭಿಮಾನದ ಪ್ರತೀಕವಾಗಿ ಸ್ಥಾಪನೆಯಾಗಿದ್ದು ಕಳೆದ 32 ವರ್ಷಗಳಿಂದ ಕನ್ನಡ ನುಡಿ ಕನ್ನಡ ಸಂಸ್ಕೃತಿಯ ಬಗೆಗೆ ಕೆಲಸ ಮಾಡುತ್ತಿದೆ.ಕನ್ನಡ ಜ್ಞಾನವನ್ನು ಉನ್ನತಿಗೇರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ. ಕನ್ನಡ ದೇಸಿ ಜ್ಞಾನದ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಅವನತಿಯ ಅಂಚಿನಲ್ಲಿರುವ ಕನ್ನಡ ಅಧ್ಯಯನ ಆಕರಗಳನ್ನು ಹುಡುಕಿ ಹೊರತೆಗೆಯುವ ಅವುಗಳನ್ನು ಪ್ರಕಟಿಸುವ ತೌಲಿನಿಕ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸಿ ಫಲಿತಗಳನ್ನು ಪ್ರಕಟಿಸುವ ಆಧುನಿಕ ತಂತ್ರಜ್ಞಾನದ  ನೆರವಿನಿಂದ ಕನ್ನಡ ಸಾಹಿತ್ಯ–ಸಂಸ್ಕೃತಿಯ ಸೊಬಗನ್ನು ತೆರೆದು ತೋರಿಸುವ ಹೀಗೆ ಇನ್ನೂ ಅನೇಕ ಕೆಲಸಗಳನ್ನು ವೇಗವಾಗಿ ಕೈಗೊಳ್ಳಬೇಕಿದೆ. ಒಂದು ಭಾಷೆಯ ಸಾಹಿತ್ಯವನ್ನು ದೇಶದ ಮತ್ತು ಭಾಷೆಯ ಗಡಿಗಳನ್ನು ದಾಟಿಸುವುದು ಇಂದು ಮೊದಲಿಗಿಂತಲೂ ಸುಲಭದ ಕೆಲಸವಾಗಿದೆ. ಕನ್ನಡ ವಿಶ್ವವಿದ್ಯಾಲಯ ಇಂತಹ ಕೆಲಸವನ್ನು ಕೈಗೊಳ್ಳಬೇಕಿದೆ. ವಿವಿಧ ಜ್ಞಾನಶಾಖೆಗಳ ಅಂತರ್ ಸಂಬಂಧಗಳನ್ನು ಹುಡುಕಿ ಅವುಗಳನ್ನು ಸೂತ್ರ ರೂಪದಲ್ಲಿ ಜೋಡಿಸುವ ಮಹತ್ಕಾರ್ಯವಾಗಬೇಕಿದೆ. ಸಾಹಿತ್ಯವು ಸಮಾಜದೊಂದಿಗೆ ಹುಟ್ಟಿ ಸಮಾಜವನ್ನು ಪ್ರಭಾವಿಸುವ ವಿಧಾನಗಳನ್ನು ಬಹು ಆಯಾಮಗಳ ಹಿನ್ನೆಲೆಯಲ್ಲಿ ಮತ್ತಷ್ಟು ಗಂಭೀರವಾಗಿ ಅಧ್ಯಯನ ಮಾಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಪ್ರೊ.ಡಿ.ವಿ.ಪರಮಶಿವಮೂರ್ತಿ ಕುಲಪತಿ

ಹಂಪಿ ಕನ್ನಡ ವಿಶ್ವವಿದ್ಯಾಲಯ ವಿದ್ಯಾರಣ್ಯ ಕ್ಯಾಂಪಸ್‌ನ ವಿಹಂಗಮ ನೋಟ
ಹಂಪಿ ಕನ್ನಡ ವಿಶ್ವವಿದ್ಯಾಲಯ ವಿದ್ಯಾರಣ್ಯ ಕ್ಯಾಂಪಸ್‌ನ ವಿಹಂಗಮ ನೋಟ
ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿರುವ ಬಯಲು ರಂಗಮಂದಿರ
ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿರುವ ಬಯಲು ರಂಗಮಂದಿರ
ಹಂಪಿ ವಿಶ್ವವಿದ್ಯಾಲಯದ ಆಕರ್ಷಕ ಕಟ್ಟಡಗಳು
ಹಂಪಿ ವಿಶ್ವವಿದ್ಯಾಲಯದ ಆಕರ್ಷಕ ಕಟ್ಟಡಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT