ಹೊಸಪೇಟೆ (ವಿಜಯನಗರ): ದೇವರಿಗೆ ಮಾಡಿದ ಅಭಿಷೇಕದ ನೀರು, ಪಂಚಾಮೃತವನ್ನು ಕುಡಿಯುವುದು ತಲೆ ತಲಾಂತರದಿಂದ ನಡೆದುಬಂದ ಸಂಪ್ರದಾಯ. ಆದರೆ ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ಅದನ್ನೇ ತುಳಿದುಕೊಂಡು ಹೋಗುವ ದೌರ್ಭಾಗ್ಯ ಭಕ್ತರಿಗೆ ಎದುರಾಗಿದೆ.
ವಿರೂಪಾಕ್ಷನಿಗೆ ಮಾಡಿದ ಅಭಿಷೇಕದ ನೀರು, ಹಾಲು, ತುಪ್ಪ, ಮೊಸರು, ಜೇನು, ಎಳನೀರೆಲ್ಲ ಹೋಗಲು ಪೈಪ್ ವ್ಯವಸ್ಥೆ ಇದೆ. ಆದರೆ ಅದು ಆಗಾಗ ಕಟ್ಟಿಕೊಳ್ಳುವ ಕಾರಣ ಭಕ್ತರು, ಪ್ರವಾಸಿಗರು ನಡೆದಾಡುವ ಜಾಗದಲ್ಲೇ ರಾಡಿಯಂತೆ ಹರಡಿಕೊಳ್ಳುತ್ತಿದೆ. ಅನಿವಾರ್ಯವಾಗಿ ಅದನ್ನು ತುಳಿದುಕೊಂಡೇ ಹೊರಗಡೆ ಹೋಗಬೇಕಾಗುತ್ತದೆ.
‘ತಿಂಗಳೋ, ಎರಡು ತಿಂಗಳಿಗೋ ಒಮ್ಮೆ ಇಂತಹ ಸಮಸ್ಯೆ ತಲೆದೋರುತ್ತಿದೆ. ತಕ್ಷಣ ಕಟ್ಟಿಕೊಂಡ ಕಸ ತೆಗೆದು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗುತ್ತಿದೆ. ದೇವಸ್ಥಾನದಲ್ಲಿ ಯಾವುದೇ ಸುಧಾರಣಾ ಕೆಲಸ ಮಾಡುವುದಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ನಿರ್ಬಂಧ ಇದೆ. ಹೀಗಾಗಿ ಹೊಸದಾಗಿ ದೊಡ್ಡ ಗಾತ್ರದ ಪೈಪ್ ಅಳವಡಿಸುವುದು, ಕಲ್ಲು ಕೊರೆಯುವುದು ಮಾಡುವಂತಿಲ್ಲ. ಭಕ್ತರ ಭಾವನೆಗೆ ಧಕ್ಕೆ ಬರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಹಂಪಿ ವಿರೂಪಾಕ್ಷನಿಗೆ ಮಾಡಿದ ಅಭಿಷೇಕದ ನೀರು ಭಕ್ತರು ನಡೆದಾಡುವ ಜಾಗದಲ್ಲೇ ಹರಡಿ ರಾಡಿಯಾಗಿರುವುದು ಗುರುವಾರ ಕಾಣಿಸಿತು –ಪ್ರಜಾವಾಣಿ ಚಿತ್ರ