ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ ಮೈಲಾರಕ್ಕೆ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಶುಕ್ರವಾರ ಭೇಟಿ ನೀಡಿ, ಮೈಲಾರಲಿಂಗೇಶ್ವರ ಸ್ವಾಮಿ ದರ್ಶನ ಪಡೆದರು.
ಸ್ವಾಮಿಯ ಉದ್ಬವಲಿಂಗಕ್ಕೆ ಸಂಕಲ್ಪ ಪೂಜೆ ನೆರವೇರಿಸಿದ ಸಚಿವರು, ಬಳಿಕ ಗಂಗಿಮಾಳಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ದೇವಸ್ಥಾನ ವತಿಯಿಂದ ಸಚಿವರನ್ನು ಸನ್ಮಾನಿಸಿದರು. ನಂತರ ಕಾಗಿನೆಲೆ ಶಾಖಾ ಮಠಕ್ಕೆ ಭೇಟಿ ನೀಡಿ, ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದರು.
ಪಕ್ಷ ತೊರೆಯುವುದಿಲ್ಲ: ಬಿಜೆಪಿ ಪಕ್ಷ ನಾನು ಸೇರಿದಂತೆ ಕಾಂಗ್ರೆಸ್ ಪಕ್ಷ ತೊರೆದು ಬಂದ ಎಲ್ಲರಿಗೆ ಎಲ್ಲವನ್ನೂ ಕೊಟ್ಟಿದೆ. ಸರ್ಕಾರದಲ್ಲಿ ಉತ್ತಮ ಕೆಲಸ ಮಾಡಿದ ಸಂತೃಪ್ತಿ ಇದೆ. ಯಾವುದೇ ಕಾರಣಕ್ಕೂ ನಾವು ಬಿಜೆಪಿ ತೊರೆಯುವುದಿಲ್ಲ ಎಂದು ಸಚಿವ ಎಂ.ಟಿ.ಬಿ.ನಾಗರಾಜ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವರಿಷ್ಠರು ಕೊಟ್ಟ ಭರವಸೆ ಈಡೇರಿಸದೇ ಇದ್ದಾಗ ಅತೃಪ್ತಿ ವ್ಯಕ್ತಪಡಿಸಿದ್ದು ನಿಜ. ಈಗ ಬಿಜೆಪಿ ನಮಗೆ ಎಲ್ಲವನ್ನೂ ಕೊಟ್ಟಿದೆ. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಪಕ್ಷ ಬಿಡುವ ಸಂದರ್ಭ ಬಂದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ತಿಳಿಸಿದರು.
ನಮ್ಮ ಸಮಾಜದ ಮುಖಂಡರು, ಸ್ನೇಹಿತರು ಕಾಂಗ್ರೆಸ್ ಗೆ ಆಹ್ವಾನಿಸಿದ್ದಾರೆ. ನಮ್ಮ ಸ್ನೇಹ ಸಂಬಂಧವೇ ಬೇರೆ, ರಾಜಕಾರಣವೇ ಬೇರೆ. ಸಿದ್ದರಾಮಯ್ಯನವರ ಬಗ್ಗೆ ಈಗಲೂ ಅಭಿಮಾನವಿದೆ. ಅವರಿಗೆ ಮತ್ತೆ ಸಿಎಂ ಆಗುವ ಯೋಗ ಇದ್ದರೆ ಯಾರಿಂದಲೂ ತಪ್ಪಿಸಲು ಆಗದು. ಆದರೆ, ರಾಜಕೀಯವಾಗಿ ನಮ್ಮಿಬ್ಬರ ದಾರಿ ಬೇರೆ ಬೇರೆಯಾಗಿದೆ ಎಂದರು.
ಹೊಳಲು ಗ್ರಾ.ಪಂ. ಮೇಲ್ದರ್ಜೆಗೆ ಪರಿಶೀಲನೆ: 15-20 ಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಹೊಳಲು ಗ್ರಾ.ಪಂ. ಜನಸಂಖ್ಯೆ ಆಧರಿಸಿ ಜಿಲ್ಲಾಧಿಕಾರಿ ಪ್ರಸ್ತಾವ ಸಲ್ಲಿಸಿದರೆ, ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ತಹಶೀಲ್ದಾರ್ ಕೆ.ಶರಣಮ್ಮ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶರಾವ್, ಮುಖಂಡರಾದ ಈಟಿ ಲಿಂಗರಾಜ, ಮಾಲತೇಶ, ಜೆ.ಪರಶುರಾಮ, ರಾಘವೇಂದ್ರ, ಹನುಮಂತು ಇತರರು ಇದ್ದರು.