ಹೊಸಪೇಟೆ (ವಿಜಯನಗರ): ಇಲ್ಲಿನ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ (83) ಅವರು ಸೋಮವಾರ ನಸುಕಿನ ಜಾವ ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯದ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಸಮಾರಂಭಗಳಿಂದ ದೂರ ಉಳಿದಿದ್ದರು.
ಹಂಪಿ ಹೇಮಕೂಟ, ಬಾದಾಮಿ ಶಿವಯೋಗ ಮಂದಿರ, ಬಳ್ಳಾರಿ ಮತ್ತು ಹಾಲಕೆರೆ ಮಠದ ಅಧ್ಯಕ್ಷರಾಗಿದ್ದರು. ಶಾಖಾ ಮಠದ ಸ್ವಾಮೀಜಿಗಳು ಸಭೆ ಸೇರಿ ಚರ್ಚಿಸಿದ ನಂತರ ಅಂತ್ಯಕ್ರಿಯೆ ಎಲ್ಲಿ? ಯಾವಾಗ? ನಡೆಸಬೇಕು ಎನ್ನುವುದು ಅಂತಿಮವಾಗಲಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಬಿದರಿ, ಸ್ವಾಮೀಜಿ ಹುಟ್ಟೂರು. ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿ ಬಣದ ನೇತೃತ್ವ ಸ್ವಾಮೀಜಿ ವಹಿಸಿದ್ದರು.