ಹೊಸಪೇಟೆ (ವಿಜಯನಗರ): ಕೋವಿಡ್ ನಿಯಮ ಉಲ್ಲಂಘಿಸಿ ಶ್ರೀಕೃಷ್ಣದೇವರಾಯ ಜಯಂತಿ ಆಚರಿಸಿದ ಆರೋಪದ ಮೇರೆಗೆ ಹತ್ತು ಜನರ ವಿರುದ್ಧ ಸೋಮವಾರ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಪುನೀತ್ ಕೆರೆಹಳ್ಳಿ, ಗೋಪಿ ಕರಿಯಪ್ಪ, ಅನಂತ ಪದ್ಮನಾಭ, ಅನಿಲ್ಕುಮಾರ್ ನಾಗರಾಜು, ಚಂದ್ರಕಾಂತ್ ಶರಣಪ್ಪ, ಸಚಿನ್ ಮಲ್ಲೇಶ್, ತುಮಕೂರಿನ ಹರಿನಾಥರೆಡ್ಡಿ ಅಂಜಿನರೆಡ್ಡಿ, ರವಿಕುಮಾರ್ ಪ್ರಭಾಕರ್, ಶಶಿಕಿರಣ್ ಸುಂದರ್ಪಾಡ್ಯನ್, ತರುಣ ಮಲ್ಲೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
‘ಕೊರೊನಾ ಸೋಂಕು ಹರಡದಂತೆ ತಡೆಯಲು ಗುಂಪುಗೂಡಿ ಕಾರ್ಯಕ್ರಮ ಆಚರಿಸುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಹೀಗಿದ್ದರೂ ಸೋಮವಾರ ಮಧ್ಯಾಹ್ನ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗುಂಪುಗೂಡಿ ಕೃಷ್ಣದೇವರಾಯನ ಭಾವಚಿತ್ರ ಇಟ್ಟು ಜಯಂತಿ ಆಚರಿಸಿದ್ದಾರೆ. ಅಂತರ ಕಾಯ್ದುಕೊಂಡಿರಲಿಲ್ಲ. ಮುಖಗವಸು ಸೂಕ್ತ ರೀತಿಯಲ್ಲಿ ಧರಿಸದ ಕಾರಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
ಎಲ್ಲ ಹತ್ತು ಜನ ರಾಷ್ಟ್ರ ರಕ್ಷಣಾ ಪಡೆ, ಬಜರಂಗ ದಳದ ಕಾರ್ಯಕರ್ತರು ಎಂದು ತಿಳಿದು ಬಂದಿದೆ.