ಹೊಸಪೇಟೆ (ವಿಜಯನಗರ): ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದ ಪ್ರೊ. ಎಂ.ಎ. ಹೆಗಡೆ ಅವರಿಗೆ ಸೋಮವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅಧ್ಯಯನಾಂಗದ ನಿರ್ದೇಶಕ ಪಿ. ಮಹದೇವಯ್ಯ ಮಾತನಾಡಿ, ‘ಕನ್ನಡದ ನಿಘಂಟು ಶಾಸ್ತ್ರ, ಶಾಸ್ತ್ರ ಸಾಹಿತ್ಯ, ವಿಮರ್ಶೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಪೂರ್ವ ಸಾಧಕ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯನವರು’ ಎಂದು ಹೇಳಿದರು.
‘ಶಬ್ದಗಳು ಶುಷ್ಕವಲ್ಲ. ಅವುಗಳಿಗೆ ಸಾಮಾಜಿಕ ಆಯಾಮಗಳು ಇವೆ ಎಂದು ತೋರಿಸಿಕೊಟ್ಟರು. ಉಪಭಾಷೆಗಳ ಸ್ವರೂಪವನ್ನು ಸಾಮಾಜಿಕ ನೆಲೆಯಲ್ಲಿ ವಿಶ್ಲೇಷಣೆ ಮಾಡಿದವರು. ‘ಪ್ರಜಾವಾಣಿ’ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಸುಮಾರು 19 ವರ್ಷಗಳ ಕಾಲ ಶಬ್ದಾರ್ಥ ವಿವೇಚನೆಯನ್ನು ನೀಡಿದವರು. ಪದ ಮತ್ತು ವಾಕ್ಯರಚನೆಗಳನ್ನು ಸಾಮಾಜಿಕ ನೆಲೆಯಲ್ಲಿ ವಿಶ್ಲೇಷಿಸುತ್ತಿದ್ದರು’ ಎಂದು ನೆನೆದರು.
ಕುಲಪತಿ ಪ್ರೊ. ಸ.ಚಿ. ರಮೇಶ, ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಹಾಗೂ ಸಿಬ್ಬಂದಿ ಇದ್ದರು.