ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Last Updated 5 ಫೆಬ್ರುವರಿ 2023, 13:20 IST
ಅಕ್ಷರ ಗಾತ್ರ

ಕೊಟ್ಟೂರು (ವಿಜಯನಗರ ಜಿಲ್ಲೆ): ‘ಈ ನಾಡಿನ ಸಂಸ್ಕೃತಿ, ಸಂಸ್ಕಾರ ಹಾಗೂ ಶಿಕ್ಷಣಕ್ಕೆ ಮಠಗಳ ಕಾಣಿಕೆ ಬಹಳ ದೊಡ್ಡದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಉಜ್ಜಯಿನಿ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಎಂಟನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಳ್ಳೇಗಾಲದಿಂದ ನಿಪ್ಪಾಣಿ, ಬೀದರ್‌ನಿಂದ ಚಾಮರಾಜನಗರದ ವರೆಗೆ ಈ ನಾಡಿಗೆ ಮಠಗಳ ಕಾಣಿಕೆ ದೊಡ್ಡದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬರುವುದಕ್ಕೂ ಮುಂಚೆಯೇ ಮಠಗಳು ನಾಡಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದವು. ಅದರಲ್ಲೂ ಗ್ರಾಮೀಣರಿಗೆ ಅಕ್ಷರ ಕಲಿಸಿದ್ದರಿಂದ ಅನೇಕ ಜನ ಶಿಕ್ಷಕರು, ಎಂಜಿನಿಯರ್‌ಗಳು, ಡಾಕ್ಟರ್‌ಗಳಾಗಲು ಸಾಧ್ಯವಾಗಿದೆ. ಎಲ್ಲಾ ವಿಚಾರಗಳಲ್ಲಿ ಮಠಗಳು ಪ್ರೇರಣೆ ಕೊಟ್ಟಿವೆ ಎಂದರು.

ತರಳಬಾಳು ಹುಣ್ಣಿಮೆ ಮಹೋತ್ಸವ ವೈಚಾರಿಕ ಕ್ರಾಂತಿಯ ಬೀಜದ ಅಂಕುರವಾಗಿದೆ. ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ವಚನ ಸಾಹಿತ್ಯ, ಪಾಶ್ಚಾಮಾತ್ಯ ವಿದ್ವಾಂಸರ ವಿಚಾರಗಳನ್ನು ಅಧ್ಯಯನ ಮಾಡಿ, ಜ್ಞಾನದ ಮೇಲೆ ಹಿಡಿತ ಸಾಧಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂದಿನ ಸಾಮಾಜಿಕ, ಆರ್ಥಿಕ, ವೈಯಕ್ತಿಕ ಸಮಸ್ಯೆಗಳು, ಸವಾಲುಗಳಿಗೆ ನೈತಿಕತೆ ಮೂಲಕ ಬೋಧನೆ ಮಾಡುತ್ತಿದ್ದಾರೆ. ಅದಕ್ಕೆ ಅವರ ಅನೇಕ ಲೇಖನಗಳೇ ಸಾಕ್ಷಿ. ಅವುಗಳು ಮನುಷ್ಯನ ಬದುಕಿಗೆ ಬಹಳ ಹತ್ತಿರವಾಗಿವೆ. ರೈತರು, ಕಾರ್ಮಿಕರು, ಸರ್ಕಾರಿ ನೌಕರರು, ರಾಜಕಾರಣಿಗಳ ಬದುಕಿಗೆ ಅವರ ವಿಚಾರಗಳ ಮೂಲಕ ಹತ್ತಿರವಾಗಿದ್ದಾರೆ. ಇಂತಹವರ ಅವಶ್ಯಕತೆ ಬಹಳ ಇದೆ ಎಂದು ಹೇಳಿದರು.

ಉತ್ತಮ ವಿಚಾರಕ್ಕೆ ಧರ್ಮ ಇಲ್ಲ. ವಿಚಾರ ಯಾರ ಮನಸ್ಸಾಲ್ಲಾದರೂ ಹುಟ್ಟಬಹುದು. ವಿಚಾರದ ಮೂಲಕ್ಕೆ ಜಾತಿ, ಧರ್ಮ ಇಲ್ಲ. ಅದು ಬಳಸುವಾಗ ಬಲಪಂಥ, ಎಡಪಂಥ ಹಾಗೂ ಮಧ್ಯಮ ಪಂಥ ಅಂತ ಸೇರ್ಪಡೆಗೊಳ್ಳುತ್ತದೆ. ವಿಚಾರ ಅರ್ಥ ಮಾಡಿಕೊಂಡರೆ ಯಾವ ಭಾವವೂ ಬರುವುದಿಲ್ಲ. ಹತ್ತು ಹಲವು ವಿಚಾರಗಳಲ್ಲಿ ಸಿರಿಗೆರೆ ಶ್ರೀಗಳು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಹಿಂದಿನ ಜಗದ್ಗುರುಗಳು ಸಾಧಕರಾಗಿದ್ದರು. ಕಠಿಣ ಕಾಲದಲ್ಲಿ ಉತ್ತಮ ವಿಚಾರಗಳನ್ನು ಪ್ರತಿಪಾದಿಸಿದ್ದರು. ಈಗಲೂ ಅವರ ವಿಚಾರಗಳು ನಮ್ಮ ನಡುವೆ ಜೀವಂತವಾಗಿವೆ ಎಂದರು.

ಅಸ್ಪೃಶ್ಯತೆ, ಮೌಢ್ಯತೆ ಇದೆ:
ಬಸವಣ್ಣನವರ ವಿಚಾರಗಳು ಇಂದಿಗೂ ಪ್ರಸ್ತುತ ಎಂದು ಹೇಳುತ್ತೇವೆ. ಅದರ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ. ಅವರ ವಿಚಾರಗಳು ಈಗಲೂ ಪ್ರಸ್ತುತವಾಗಿದ್ದರೆ ಇಂದಿಗೂ ಸಮಾಜದಲ್ಲಿ ಲಿಂಗಭೇದ, ಅಸ್ಪೃಶ್ಯತೆ, ಮೌಢ್ಯತೆ ಇದೆ ಎಂದರ್ಥ. ಅವರ ವಿಚಾರಗಳನ್ನು ಮನಗಾಣುವ ಅಗತ್ಯವಿದೆ. ನಮಗೆ ಬೇಕಿರುವುದು ಚಾರಿತ್ರ್ಯ ಎಂದರು.
ರಸ್ತೆ, ಕಟ್ಟಡಗಳಿಂದ ದೇಶ ಆಗುವುದಿಲ್ಲ. ಚಾರಿತ್ರ್ಯದಿಂದ ದೇಶ ಆಗುತ್ತದೆ. ನಮ್ಮ ದೇಶದಲ್ಲಿ ಅನೇಕ ಜನ ಆಚಾರರು ಇದ್ದಾರೆ. ಆದರೆ, ಆಚಾರ, ವಿಚಾರ ಬೇಕಾಗಿದೆ. ಭಕ್ತಿ ಚಳವಳಿ ನಿರಂತರವಾಗಿ ನಡೆಯುತ್ತಿದೆ. ಅದರ ಆಚರಣೆ ಎಷ್ಟರಮಟ್ಟಿಗೆ ನಡೆಯುತ್ತಿದೆ? ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಶ್ರೀಸಾಮಾನ್ಯನಲ್ಲಿ ಅರಿವು ಮೂಡಿಸುವುದು. ಆ ಆ ಅರಿವು ಮೂಡಿಸುವ ಕೆಲಸ ತರಳಬಾಳು ಹುಣ್ಣಿಮೆ ಮಹೋತ್ಸವ ಮಾಡುತ್ತಿದೆ. ಇದು ವಾಸ್ತವದಲ್ಲಿ ಅರಿವಿನ ಹಬ್ಬ ಎಂದು ಹೇಳಿದರು.

ಸಿರಿಗೆರೆ ಶ್ರೀಗಳು ಬಹಳ ನಿಖರ, ಸ್ಪಷ್ಟವಾಗಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಾರೆ. ಅವರು ನ್ಯಾಯಪೀಠದ ಮೇಲಿರಲಿ ಅಥವಾ ಇಲ್ಲದಿರಲಿ ನ್ಯಾಯಯುತವಾಗಿ ಕೆಲಸ ಮಾಡುತ್ತಾರೆ. ಹುಣ್ಣಿಮೆ ಮಹೋತ್ಸವದ ಮೂಲಕ ಈ ಭಾಗದಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಸ್ಕೃತಿ, ಸಂಸ್ಕಾರ ಬೆಳೆಸಲು ಶ್ರಮಿಸುತ್ತಿದ್ದಾರೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸಿರಿಗೆರೆ ಮಠದಲ್ಲಿ ಶ್ರೀಗಳು ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಉತ್ತಮವಾದ ತೀರ್ಪುಗಳನ್ನು ಕೊಡುತ್ತಾರೆ. ಧರ್ಮದಿಂದ ನಡೆದುಕೊಂಡರೆ ಯಾವುದೇ ಕಾನೂನುಗಳಿಗೂ ಭಯಪಡುವ ಅಗತ್ಯವಿರುವುದಿಲ್ಲ ಎಂದು ಹೇಳಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಿರಿಗೆರೆ ಶ್ರೀಗಳು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ದೂರದೃಷ್ಟಿ ಇರುತ್ತದೆ. ಈ ಮಠದಲ್ಲಿ ಓದಿದ ಅನೇಕರು ದೇಶ–ವಿದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಮಠದ ಗವಿಸಿದ್ದೇಶ್ವರ ಸ್ವಾಮೀಜಿ, ಬೆಂಗಳೂರು ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ, ಶಾಸಕ ಎನ್‌.ವೈ. ಗೋಪಾಲಕೃಷ್ಣ, ಸಂಸದರಾದ ವೈ.ದೇವೇಂದ್ರಪ್ಪ, ಜಿ.ಎಂ. ಸಿದ್ದೇಶ್ವರ, ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಡಾ. ಬಿ.ಸಿ. ಮೂಗಪ್ಪ, ಕೊಪ್ಪಳದ ವೀರನಗೌಡ ರುದ್ರಗೌಡ ಪಾಟೀಲ ಇದ್ದರು.


ಕೊಟ್ಟೂರು ಕೆರೆ ತುಂಬಿಸಲು ಅನುಮೋದನೆ–ಸಿ.ಎಂ
‘ತುಂಗಭದ್ರಾ ನದಿ ಸಮೀಪದ ರಾಜವಾಳ ಏತ ನೀರಾವರಿ ಯೋಜನೆಯಿಂದ ವಿಶೇಷ ಪೈಪ್‌ಲೈನ್‌ ಮೂಲಕ ಕೊಟ್ಟೂರು ಕೆರೆ ತುಂಬಿಸಲಾಗುವುದು. ಎಷ್ಟೇ ಖರ್ಚಾದರೂ ಕೆರೆ ಕೆಲಸಕ್ಕೆ ಅನುಮೋದನೆ ಕೊಡುವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಸಿರಿಗೆರೆ ಶ್ರೀಗಳು ಕೃಷಿ, ನೀರಾವರಿ ಬಗ್ಗೆ ಅಪಾರ ಬದ್ಧತೆ ಹೊಂದಿದ್ದಾರೆ. ಎಲ್ಲೇ ಹುಣ್ಣಿಮೆ ಮಹೋತ್ಸವ ಮಾಡಿದರೂ ಆ ಭಾಗದ ರೈತರು, ಕೃಷಿ, ನೀರಾವರಿ ಬಗ್ಗೆ ಯೋಚಿಸಿ, ಕೆಲಸ ಮಾಡುತ್ತಾರೆ. ಅದಕ್ಕೆ ಜಗಳೂರು ಕೆರೆ ಸಂಪೂರ್ಣ ತುಂಬಿರುವುದೇ ಸಾಕ್ಷಿ. ಕೊಟ್ಟೂರು ಕೆರೆಗೆ ನೀರು ಹರಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ. ಹಾಗಾಗಿ ಈ ಕೆಲಸ ಮಾಡಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಮಠಗಳು ಮಡಿವಂತಿಕೆ ಬಿಟ್ಟಾಗ ಬದಲಾವಣೆ–ಬಿಎಸ್‌ವೈ
‘ಮಠಾಧೀಶರು ಮಡಿವಂತಿಕೆ ಬಿಟ್ಟಾಗ ಸಮಾಜದಲ್ಲಿ ಯಾವೆಲ್ಲ ಬದಲಾವಣೆ ಆಗುತ್ತದೆ ಎನ್ನುವುದಕ್ಕೆ ಸುತ್ತೂರು, ಸಿದ್ದಗಂಗಾ ಹಾಗೂ ಸಿರಿಗೆರೆ ಮಠಗಳೇ ಸಾಕ್ಷಿ. ತರಳಬಾಳು ಹುಣ್ಣಿಮೆ ಮಹೋತ್ಸವ ಇಂತಹ ಭಾವನೆಗಳನ್ನು ಬೆಳೆಸಲು ಸಹಕಾರಿಯಾಗಿದೆ’ ಎಂದು ಶಾಸಕ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸರ್ಕಾರಕ್ಕೆ ಮಾರ್ಗದರ್ಶನ ಮಾಡುವ ಮಠಗಳು ಕರ್ನಾಟಕದಲ್ಲಿವೆ–ರಾಜ್ಯಪಾಲ ಗೆಹಲೋತ್‌
‘ಸರ್ಕಾರಕ್ಕೆ ಮಾರ್ಗದರ್ಶನ ಮಾಡುವ ಮಠಗಳಿದ್ದರೆ ಅದು ಕರ್ನಾಟಕದಲ್ಲಿ. ಅವುಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ’ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ತಿಳಿಸಿದರು.

ಮಠಗಳು ನಾಡಿನ ಜನೋಪಯೋಗಿ ಕಾರ್ಯಗಳನ್ನು ಮಾಡುವುದರ ಮೂಲಕ ಸರ್ವಜನಾಂಗಕ್ಕೂ ಒಳಿತನ್ನು ಬಯಸುತ್ತಿವೆ. ಈ ತರಳಬಾಳು ಹುಣ್ಣಿಮೆ ನಾಡಿನಲ್ಲಿ ಐಕ್ಯತೆ ಮೂಡಿಸಲು ಸಹಕಾರಿಯಾಗಿದೆ. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದ ತಳಹದಿ ಮೇಲೆ ಶಾಸನ ಸಭೆಗಳು ನಡೆದಾಗ ಜನಸಾಮಾನ್ಯರಿಗೂ ನ್ಯಾಯ ದೊರೆಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT