ಬೋಧಕರ ಗಂಭೀರ ಕೊರತೆಯ ನಡುವೆಯೂ ಕನ್ನಡದ ಹೆಮ್ಮೆಯ ವಿಶ್ವವಿದ್ಯಾಲಯ ಸಂಶೋಧನೆ ಮತ್ತು ಯೋಜನೆಗಳಲ್ಲಿ ಕೆಲವೊಂದಿಷ್ಟು ಸಾಧನೆಗಳನ್ನು ಮಾಡಿದೆ. ಸಾಂಸ್ಕೃತಿಕ ಮುಖಾಮುಖಿ, ಜಾನಪದ ಸಂಶೋಧನೆ, ಬುಡಕಟ್ಟು, ಜನಪದ ಮಹಾಕಾವ್ಯಗಳು, ಶಾಸನ ಸಂಪುಟಗಳು, ದೇವಾಲಯ ಸಂಪುಟಗಳು, ವಿಶ್ವಕೋಶಗಳನ್ನು ಇದರಲ್ಲಿ ಪ್ರಮುಖವಾಗಿ ಗುರುತಿಸಬಹುದು. ಆದರೆ ಬೋಧಕರ ಹುದ್ದೆಗಳನ್ನೆಲ್ಲ ತುಂಬಿದ್ದರೆ ಇಂತಹ ಅಮೂಲ್ಯ ಕೃತಿಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು ಹಾಗೂ ಅದೆಷ್ಟೋ ಆಸಕ್ತ ಯುವಜನರಿಗೆ ಮೌಲಿಕ ಮಾರ್ಗದರ್ಶನದ ಅವಕಾಶ ಆಗುತ್ತಿತ್ತು ಎಂಬುದೂ ಅಷ್ಟೇ ಸತ್ಯ.