ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ಅವರ ಬೆಂಬಲಿಗರಿಂದ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬದವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ‘ಆಮ್ ಆದ್ಮಿ’ ಪಕ್ಷ (ಎ.ಎ.ಪಿ) ಆಗ್ರಹಿಸಿದೆ.
ಈ ಸಂಬಂಧ ಪಕ್ಷದ ಮುಖಂಡರು ಗುರುವಾರ ಮುಖ್ಯಮಂತ್ರಿಯವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ ಒತ್ತಾಯಿಸಿದರು.
ಸಚಿವ ಆನಂದ್ ಸಿಂಗ್ ಹಾಗೂ ಅವರೊಂದಿಗೆ 20 ರಿಂದ 25 ಜನರು ಡಿ. ಪೋಲಪ್ಪ ಎಂಬುವರ ಮನೆಗೆ ಹೋಗಿ ಬೆದರಿಕೆ ಹಾಕಿರುವುದರಿಂದ ಅವರ ಕುಟುಂಬ ಸದಸ್ಯರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅವರೆಲ್ಲರಿಗೂ ಸೂಕ್ತ ಭದ್ರತೆ ಒದಗಿಸಿ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಪಕ್ಷದ ಜಿಲ್ಲಾ ಅಧ್ಯಕ್ಷ ಜೆ.ಎನ್. ಕಾಳಿದಾಸ್, ಎಂ.ಡಿ. ಜಾಕೀರ್, ಎ.ಟಿ. ದಾದಾ ಕಲಂದರ್ ಇತರರಿದ್ದರು.