ಹೊಸಪೇಟೆ : ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿರುವ 152 ಅಧಿಕೃತ ಪ್ರವಾಸಿ ಮಾರ್ಗದರ್ಶಿಗಳ ಸಹಿತ ರಾಜ್ಯದ 398 ಪ್ರವಾಸಿ ಮಾರ್ಗದರ್ಶಿಗಳಿಗೆ ಕಳೆದ ನಾಲ್ಕು ತಿಂಗಳಿಂದ ತಲಾ ₹ 5,000 ಗೌರವಧನ ಸಂದಾಯವಾಗಿಲ್ಲ.
‘ಮಾರ್ಚ್ನಲ್ಲಿ ನಮಗೆ ಕೊನೆಯ ಗೌರವಧನ ಸಿಕ್ಕಿದೆ. ಬಳಿಕ ಚುನಾವಣೆ, ಹೊಸ ಸರ್ಕಾರ, ಜಿ20 ಸಬೆ ಎಂಬ ಕಾರಣಕ್ಕೆ ಗೌರವಧನ ಕೊಡುವುದನ್ನು ಮುಂದೂಡುತ್ತ ಬಂದಿದ್ದಾರೆ. ಇದರಿಂದ ನಮ್ಮ ಕುಟುಂಬ ನಿರ್ವಹಣೆ ಕಷ್ಟವಾಗಿದೆ’ ಎಂದು ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಜಿ.ಮಂಜುನಾಥ ಗೌಡ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಕೋವಿಡ್ ಬಳಿಕ ಹಂಪಿಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಒಂದು ಅಂದಾಜಿನ ಪ್ರಕಾರ ಶೇ 3ಕ್ಕೆ ಇಳಿದಿದೆ. ವಿದೇಶಿಯರು ಬಂದರೆ ನಿಜಕ್ಕೂ ನಮ್ಮ ಆರ್ಥಿಕ ಸಂಕಷ್ಟ ಒಂದಿಷ್ಟು ಮಟ್ಟಿಗೆ ನಿವಾರಣೆಯಾಗುತ್ತದೆ, ಈಗ ನಾವು ದೇಶಿ ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.
‘ಗೌರವಧನ ಬಿಡುಗಡೆ ಮಾಡುವಂತೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಮೇಲಿಂದ ಮೇಲೆ ಪತ್ರ ಬರೆಯುತ್ತಲೇ ಇದ್ದೇವೆ, ಈಚೆಗೆ ಮುಖತಃ ಭೇಟಿಯಾಗಿ ಕಷ್ಟ ಹೇಳಿಕೊಂಡಿದ್ದೇವೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ವಿ.ಹಂಪಿ ಹೇಳಿದರು.
ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಆನಂದ್ ಸಿಂಗ್ ಅವರು ವಿಶೇಷ ಮುತುವರ್ಜಿ ವಹಿಸಿದ್ದರಿಂದ ಕಳೆದ ಒಂದು ವರ್ಷದಿಂದ ರಾಜ್ಯದ 400 ಪ್ರವಾಸಿ ಮಾರ್ಗದರ್ಶಕರಿಗೆ ಈ ಗೌರವಧನ ಸಿಗುತ್ತಿದೆ.
ಪ್ರವಾಸಿಗರ ಸಂಖ್ಯೆ ಇಳಿಮುಖ: ಬುಧವಾರ ಹಂಪಿ ಸುತ್ತಮುತ್ತ ಉತ್ತಮ ಮಳೆ ಸುರಿಯಿತು. ನಿಂತ ನೀರಲ್ಲಿ ಸ್ಮಾರಕಗಳ ಪ್ರತಿಬಿಂಬ ಅತ್ಯುತ್ತಮವಾಗಿ ಕಾಣಿಸಿದವು. ಆದರೆ ಅದನ್ನು ಸವಿಯಲು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇರಲಿಲ್ಲ. ಭಾರಿ ಮಳೆ ಬಂದರೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗುವುದು ಸಾಮಾನ್ಯವಾಗಿದ್ದು, ಇದರ ಪರೋಕ್ಷ ಹೊಡೆತ ಪ್ರವಾಸಿ ಮಾರ್ಗದರ್ಶಿಗಳ ಮೇಲೆ ಬೀಳುತ್ತಿದೆ.
ಇಲಾಖೆಗೆ ಸಮಸ್ಯೆಯ ಅರಿವಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಕೆಲವೊಮ್ಮೆ ಈ ರೀತಿ ಆಗುತ್ತದೆ.ಶೀಘ್ರವೇ ಗೌರವಧನ ಬಿಡುಗಡೆ ಆಗುವ ನಿರೀಕ್ಷೆ ಇದೆ–ಪ್ರಭುಲಿಂಗ ತಳಕೆರೆ ಉಪನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.