ಜಲಾಶಯದ ಮುಂದೆ ಕುಟುಂಬ ಸದಸ್ಯರ ಜೊತೆ ಸೆಲ್ಫಿ:ಪತ್ನಿ ಎಂ. ಉಷಾ ಹಾಗೂ ಕುಟುಂಬದ ಇತರೆ ಸದಸ್ಯರೊಂದಿಗೆತುಂಗಭದ್ರಾ ಜಲಾಶಯಕ್ಕೆ ಆಗಮಿಸಿದ ವೆಂಕಯ್ಯ ನಾಯ್ಡು, ಅಣೆಕಟ್ಟೆ ಮೇಲೆ ಕಾರಿನಲ್ಲಿ ತೆರಳಿದರು. ಬಳಿಕ ಕೆಲ ದೂರದ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಕ್ರಸ್ಟ್ಗೇಟ್ಗಳಿಂದ ನೀರು ಹರಿದು ಹೋಗುತ್ತಿರುವುದನ್ನು, ಜಲಾಶಯ ಹಿಂಭಾಗದಲ್ಲಿ ಸಂಗ್ರಹಗೊಂಡಿರುವ ನೀರನ್ನು ಹಾಗೂ ಸೂರ್ಯಾಸ್ತವನ್ನು ಕಣ್ತುಂಬಿಕೊಂಡರು. ಜಲಾಶಯದ ಅಂಚಿನಲ್ಲಿ ನಿಂತುಕೊಂಡು ಕುಟುಂಬ ಸದಸ್ಯರೊಡನೆ ಛಾಯಾಚಿತ್ರ, ಸೆಲ್ಫಿ ತೆಗೆದುಕೊಂಡರು. ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್ ಅವರು ವೆಂಕಯ್ಯ ನಾಯ್ಡು ಅವರನ್ನು ಸನ್ಮಾನಿಸಿ, ವಾರ್ಷಿಕ ವರದಿ ಒಪ್ಪಿಸಿದರು.