ಹರಪನಹಳ್ಳಿ (ವಿಜಯನಗರ ಜಿಲ್ಲೆ): ಕೆರೆ ನೋಡಲು ಹೋಗಿದ್ದ ಅಕ್ಕ, ಸಹೋದರ ಸೇರಿದಂತೆ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚನ್ನಹಳ್ಳಿ ತಾಂಡದಲ್ಲಿ ಬುಧವಾರ ನಡೆದಿದೆ.
ನಂದಿಬೇವೂರು ತಾಂಡದ ಅಶ್ವಿನಿ ( 17), ಅವರ ಸಹೋದರ ಅಭಿಷೇಕ (14) , ಚೆನ್ನಹಳ್ಳಿ ತಾಂಡದ ಕಾವ್ಯ (19) ಮತ್ತು ತುಂಬಿನಕೇರಿ ತಾಂಡದ ಅಪೂರ್ವ(14) ಮೃತರು.
ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದ್ದು, ಗ್ರಾಮದ ಈಜುಪಟುಗಳು ಉಳಿದವರ ಮೃತದೇಹ ಪತ್ತೆ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಸಂಬಂಧಿಕರ ಮನೆಗೆ ಬಂದಿದ್ದ ವಿದ್ಯಾರ್ಥಿಗಳು ತುಂಬಿದ ಕೆರೆ ನೋಡಲು ಹೋಗಿದ್ದಾಗ ಅಭಿಷೇಕ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ, ಆತನ ರಕ್ಷಣೆಗಿಳಿದು ಉಳಿದವರು ನೀರು ಪಾಲಾಗಿದ್ದಾರೆ ಎಂದು ಗೊತ್ತಾಗಿದೆ. ವಿಷಯ ತಿಳಿದು ಕೆರೆ ದಂಡೆಯಲ್ಲಿ ನೂರಾರು ಜನ ಸೇರಿದ್ದಾರೆ.