ಹೊಸಪೇಟೆ (ವಿಜಯನಗರ): ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರೂ ಹಾಲುಮತ ಹಕ್ಕಬುಕ್ಕ ಸಂಸ್ಕೃತಿ ಪ್ರತಿಷ್ಠಾನ ಹಾಗು ಕನಕದಾಸ ಯುವ ಸಂಘದಿಂದ ಭಾನುವಾರ ತಾಲ್ಲೂಕಿನ ಹಂಪಿಯಲ್ಲಿ ವಿಜಯನಗರ ಸಂಸ್ಥಾಪನಾ ದಿನ ಆಚರಿಸಲಾಯಿತು.
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಂಬಳಿ ಮೇಲೆ ಹಕ್ಕ ಬುಕ್ಕರ ಭಾವಚಿತ್ರ ಇಟ್ಟು ಪೂಜೆ ನೆರವೇರಿಸಿದರು. ಬಳಿಕ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು. ಇದಕ್ಕೂ ಮುನ್ನ ಕುಡಿತಿನಿ ಪಟ್ಟಣದಿಂದ ಹಂಪಿ ವರೆಗೆ ಬೈಕ್ ರ್ಯಾಲಿ ನಡೆಸಿದರು.
ಹಾಲುಮತ ಹಕ್ಕ ಬುಕ್ಕ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಪೋಲಪ್ಪ ಮಾತನಾಡಿ, ‘ಜಗತ್ತಿನ ಮೂರು ಮಹಾನ್ ಸಾಮ್ರಾಜ್ಯಗಳಲ್ಲಿ ಮೊದಲನೆಯದಾಗಿದ್ದ ವಿಜಯನಗರ ಸಾಮ್ರಾಜ್ಯ ಕಟ್ಟಿದ ಸಂಗಮ ವಂಶದ ಹಕ್ಕ ಬುಕ್ಕರು ಕುರುಬರು ಎಂದು ಎರಡು ನೂರಕ್ಕೂ ಅಧಿಕ ಶಾಸನಗಳಲ್ಲಿ ಉಲ್ಲೇಖವಿದೆ’ ಎಂದು ಹೇಳಿದರು.
‘ಇತಿಹಾಸ ತಜ್ಞರು, ವಿದೇಶಿ ವಿದ್ವಾಂಸರು, ಗೆಜೆಟಿಯರುಗಳು, ಕೈಫಿಯತ್ತುಗಳು, ಕೃತಿಗಳು, ಕಾವ್ಯಗಳು, ಜನಪದ ಹಾಡು, ಕಥೆ, ವಾಡಿಕೆಗಳಲ್ಲೂ ಅದರ ಪ್ರಸ್ತಾಪವಿದೆ. ರಾಬರ್ಟ್ ಸಿವೆಲ್, ಗಸ್ಟೌ ಅಪಾರ್ಟ್, ಎಚ್.ವಿಲ್ಸನ್, ಮಿ.ಕೌಟೊ, ಡಾ.ಗ್ರೀಗೆ, ಹೆನ್ರಿ ಹೆರಾಸ್ ಸೇರಿದಂತೆ ಅನೇಕ ವಿದೇಶಿ ವಿದ್ವಾಂಸರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರು ಕುರುಬರೆಂದು ಹೇಳಿದ್ದಾರೆ’ ಎಂದರು.
‘ಡಾ.ಎಸ್.ಶ್ರೀಕಂಠಯ್ಯ, ಡಾ. ಸಾಲೆತೊರೆ, ಡಾ.ವಸುಂಧರಾ ಫಿಲಿಯೊಜ, ಡಾ.ಎಂ.ಎಂ.ಕಲಬುರ್ಗಿ ಸೇರಿದಂತೆ ಅನೇಕ ವಿದ್ವಾಂಸರು ಕೂಡ ಹಕ್ಕಬುಕ್ಕರು ಕುರುಬರೆಂದೇ ಹೇಳಿದ್ದಾರೆ. ಕೋವಿಡ್ ಕಾರಣಕ್ಕಾಗಿ ಈ ಸಲ ವಿಜಯನಗರ ಸಂಸ್ಥಾಪನಾ ದಿನ ಸರಳವಾಗಿ ಆಚರಿಸಲಾಗಿದೆ’ ಎಂದು ತಿಳಿಸಿದರು.
ಸಂಚಾಲಕ ಟಿ.ಕೆ.ಕಾಮೇಶ ಮಾತನಾಡಿ, ‘ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರು ಹಾಲುಮತ ಕುರುಬರು, ಕನ್ನಡಿಗರು ಎನ್ನುವುದು ಹೆಮ್ಮೆಯ ಸಂಗತಿ. ಹಕ್ಕ ಬುಕ್ಕರ ಸವಿನೆನಪಿನಲ್ಲಿ ಸರ್ಕಾರ ನವೆಂಬರ್ನಲ್ಲಿ ಹಂಪಿ ಉತ್ಸವ ಆಚರಿಸುವ ಬದಲು ಏ.18ರಂದು ವಿಜಯನಗರ ಸಂಸ್ಥಾಪನಾ ಉತ್ಸವ ಆಚರಿಬೇಕು’ ಎಂದರು.