ವಿಜಯಪುರ: ಮೀನುಗಾರಿಕೆ ಆದಾಯ ಗಳಿಕೆಯ ಮಾರ್ಗವಾಗಿದ್ದು, ರೈತರು ಕೃಷಿಹೊಂಡದಲ್ಲಿ ಮೀನುಗಾರಿಕೆ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದು ಅರಬಾವಿ ತೋಟಗಾರಿಕೆ ಮಾಹಾವಿದ್ಯಾಲಯದ ವಿಶ್ರಾಂತ ಡೀನ್ ಡಾ.ಎಸ್.ಐ.ಹನಮಶೆಟ್ಟಿ ಹೇಳಿದರು.
ಇಲ್ಲಿನ ಭೂತನಾಳದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಒಳನಾಡು ಮೀನುಗಾರಿಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲೆ ಕೆರೆ ತುಂಬುವ ಯೋಜನೆಯಡಿ ಸಾಕಷ್ಟು ಕೆರೆಗಳು ಭರ್ತಿಯಾಗಿದ್ದು, ಮೀನುಗಾರಿಕೆಗೆ ವಿಪುಲ ಅವಕಾಶಗಳು ದೊರೆತಂತಾಗಿದೆ ಎಂದು ಹೇಳಿದರು.
ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಶೈಲ ಗಂಗನಳ್ಳಿ, ಮೀನು ಮಾರಾಟಕ್ಕೆ ಐಸ್ಬಾಕ್ಸ್, ಮೀನು ಮಾರಾಟಕ್ಕೆ ವಾಹನ, ಹರಿಗೋಲು ಸೇರಿದಂತೆ ಅನೇಕ ಸೌಲಭ್ಯಗಳಿದ್ದು, ಅವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ.ವಿಜಯಕುಮಾರ, ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚಿನ ಕೃಷಿಹೊಂಡಗಳಿದ್ದು, ಎಲ್ಲ ರೈತರು ಕೃಷಿಹೊಂಡದಲ್ಲಿ ಪರ್ಯಾಯವಾಗಿ ಮೀನುಗಾರಿಕೆಗೂ ಬಳಸಿಕೊಂಡಲ್ಲಿ, ಜಿಲ್ಲೆಯೂ 5 ಲಕ್ಷ ಟನ್ ಮೀನು ಉತ್ಪಾದನೆ ಮಾಡಬಹುದಾಗಿದೆ ಎಂದರು.
ನಾರಾಯಣಪುರ ಮೀನುಗಾರಿಕಾ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ, ಇಂಡಿ ಕೃಷಿ ವಿಜ್ಞಾನಕೇಂದ್ರದ ಪಶುವೈದ್ಯ ತಜ್ಞ ಸಂತೋಷ ಶಿಂದೆ, ವಿಜಯಪುರ ಕೃಷಿ ವಿಜ್ಞಾನ ಕೇಂದ್ರದ ಪಶುವೈದ್ಯ ತಜ್ಞರಾದ ಡಾ.ಸಂಗೀತಾ ಜಾಧವ, ಸಹಾಯಕ ಪ್ರಾಧ್ಯಾಪಕ ವಿಜಯ ಆತನೂರ, ಮುತ್ತಪ್ಪ ಬಾವಿ, ಶಿವಾನಂದ ವಾಲಿಕಾರ ಇದ್ದರು.