ವಿಜಯಪುರ: ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ ಯುವಮೋರ್ಚಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ ನೆಟ್ಟಾರು ಹತ್ಯೆ ಖಂಡನೀಯ ಹಾಗೂ ಅಕ್ಷಮ್ಯ. ಅಪರಾಧಿಗಳನ್ನು ಕೂಡಲೇ ಬಂಧಿಸಿ ಕಾನೂನು ರೀತಿ ತಕ್ಕ ಶಿಕ್ಷೆ ವಿಧಿಸಿ ಎಂದು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ ಆಗ್ರಹಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಅಮಾಯಕ ಕಾರ್ಯಕರ್ತರ ಕಗ್ಗೊಲೆಗಳಾಗುತ್ತಿವೆ. ಇಂತಹ ದುಷ್ಕೃತ್ಯಗಳಿಂದಾಗಿ ನಮ್ಮದೇ ಸರ್ಕಾರ ಮೇಲೆ ಸಾರ್ವಜನಿಕರು ವಿಶ್ವಾಸ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ದೇಶ ಹಾಗೂ ಧರ್ಮವನ್ನು ಪ್ರೀತಿಸುವ ಹಾಗೂ ನಮ್ಮನ್ನು ಬೆಂಬಲಿಸುವ ಅಭಿಮಾನಿಗಳನ್ನು ನಾವು ಉಳಿಸಿಕೊಳ್ಳದಿದ್ದರೆ ಇನ್ನು ಜನಸಾಮಾನ್ಯರ ಗತಿಯೇನು? ಸಂಪೂರ್ಣವಾಗಿ ನಮ್ಮವರು ನಮ್ಮ ಮೇಲೆಯೇ ಭರವಸೆಯನ್ನು ಕಳೆದುಕೊಳ್ಳುವ ಮುನ್ನ ಆ ಪಾಪಿಗಳನ್ನು ಹೆಡೆಮುರಿಕಟ್ಟಿ ಸದೆಬಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೆ, ಆಂಧ್ರಪ್ರದೇಶದ ಪೊಲೀಸ್ ಅಧಿಕಾರಿ ವಿಶ್ವನಾಥ ಸಜ್ಜನ ಅವರು ಕೈಗೊಂಡ ಕ್ರಮಗಳಂತೆ ಕಂಡಲ್ಲಿ ಗುಂಡಿಕ್ಕುವುದಾಗಲಿ, ಎನ್ ಕೌಂಟರ್ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.