ದೇವರಹಿಪ್ಪರಗಿ: ಪಟ್ಟಣದಲ್ಲಿ ಶನಿವಾರ ವಿದ್ಯುತ್ ಶಾಟ್ ಸರ್ಕಿಟ್ನಿಂದಾಗಿ ಅಂಗಡಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಯಲ್ಲಪ್ಪ ಬಮನಳ್ಳಿ ಎಂಬುವವರಿಗೆ ಸೇರಿದ ಕರಿಸಿದ್ಧೇಶ್ವರ ಎಂಟರ್ಪ್ರೈಸಸ್ ಎಂಬ ದ್ವಿಚಕ್ರವಾಹನಗಳ ಬಿಡಿಭಾಗಗಳ ಅಂಗಡಿ ರಾತ್ರಿ 11 ಗಂಟೆ ಸುಮಾರಿಗೆ ವಿದ್ಯುತ್ ಅವಘಡಕ್ಕೆ ಒಳಗಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಅಂಗಡಿ ಕಟ್ಟಡ ಸೇರಿದಂತೆ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಠಾಣೆಯ ಮುಂದಿರುವ ಅಂಗಡಿಗೆ ರಾತ್ರಿ ಬೆಂಕಿ ತಗುಲಿದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಡೆದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.