ವಿಜಯಪುರ: ಸಾಧಕ ಕ್ರೀಡಾಪಟುಗಳು ದೇಶದ ಅಮೂಲ್ಯ ಆಸ್ತಿಯಾಗಿದ್ದು, ಪ್ರತಿಯೊಬ್ಬ ಕ್ರೀಡಾಪಟುಗಳು ತಾವು ಆಯ್ಕೆ ಮಾಡಿಕೊಂಡ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ರಾಜ್ಯ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜು ಬಿರಾದಾರ ಹೇಳಿದರು.
ಇಲ್ಲಿನ ಸೋಲಾಪುರ ರಸ್ತೆಯಲ್ಲಿರುವ ಸೈಕ್ಲಿಂಗ್ ವಸತಿ ನಿಲಯದಲ್ಲಿ ಹಾಕಿ ಮಾಂತ್ರಿಕ ಧ್ಯಾನಚಂದ ಅವರ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಧ್ಯಾನಚಂದ ಅವರು ತಮ್ಮ ವಿಶೇಷ ಕ್ರೀಡಾ ಕೌಶಲಗಳಿಂದ ಹಾಕಿಯಲ್ಲಿ ಜಾದೂ ಮಾಡುವ ಮೂಲಕ ಹಾಕಿಯನ್ನು ಜನಪ್ರಿಯಗೊಳಿಸಿದರು. ತನ್ಮೂಲಕ ಹಾಕಿ ಮಾಂತ್ರಿಕ ಎಂದೇ ಜನಪ್ರಿಯವಾಗಿದ್ದನ್ನು ಯಾರೂ ಮರೆಯುವಂತಿಲ್ಲ ಎಂದರು.
ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಆಕಾಂಕ್ಷಿ ಕ್ರೀಡಾಪಟುಗಳಿಗೆ ಧ್ಯಾನಚಂದ್ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಹಾಗಾಗಿ ಕ್ರೀಡಾಪಟುಗಳು ಆಯ್ದುಕೊಂಡಿರುವ ಕ್ರೀಡೆಯಲ್ಲಿ ಧ್ಯಾನಚಂದ್ ಮಾದರಿಯಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ಅವರು ಧ್ಯಾನಚಂದ ಅವರ ಭಾವಚಿತ್ರಕ್ಕೆ ಪುಷ್ಪಾರ್ವನೆ ನೆರವೇರಿಸಿ ಮಾತನಾಡಿ, ಕ್ರೀಡಾ ಸಾಧನೆಗಾಗಿ ವಸತಿ ನಿಲಯದಲ್ಲಿ ತಂಗಿರುವ ಕ್ರೀಡಾಪಟುಗಳು ಧ್ಯಾನಚಂದ್ ಅವರಂಥ ಕ್ರೀಡಾಪಟುಗಳ ಸಾಧನೆ ಹಾಗೂ ಜೀವನ ವೃತ್ತಾಂತವನ್ನು ಅಧ್ಯಯನ ಮಾಡುವ ಮೂಲಕ ಪ್ರತಿಯೊಬ್ಬರೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.
ಜಿಲ್ಲಾ ಕ್ರೀಡಾಂಗಣ ನಾಮನಿರ್ದೇಶನ ಸದಸ್ಯ ಬಸವರಾಜ ಗೊಳಸಂಗಿ ಮಾತನಾಡಿ, ಧ್ಯಾನಚಂದ್ ಅವರು ರೈಲ್ವೆ ಹಳಿ ಮೇಲೆ ಹಾಕಿ ಅಭ್ಯಾಸ ಮಾಡಿ ಸಾಧನೆ ಮಾಡಿದ್ದನ್ನು ಕ್ರೀಡಾಪಟುಗಳು ಮಾದರಿಯಾಗಿ ಸ್ವೀಕರಿಸಬೇಕು ಎಂದರು.
ಕ್ರೀಡಾ ಪ್ರೇಮಿ ಶಿವರಾಜ್ ಪಾಟೀಲ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಜಿಲ್ಲಾ ಕ್ರೀಡಾ ವಸತಿ ಶಾಲೆಯ ಮುಖ್ಯಸ್ಥೆ ಅಲ್ಕಾ ಪಡತರೆ, ಕ್ರೀಡಾ ಇಲಾಖೆಯ ಸಿಬ್ಬಂದಿ ಎಂ.ವೈಘಿ. ಚಿಂಚಲಿ, ತರಬೇತುದಾರರಾದ ರಾಜು ಬೆಳ್ಳುಬ್ಬಿ, ಶಂಕರ ಸನ್ ಇದ್ದರು.