ವಿಜಯಪುರ: ವಿಜಯಪುರ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಮಖನಾಪುರ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಪಿಂಟು(ಪಾಂಡುರಂಗ ಗೋಪು ರಾಠೋಡ) ಅವಿರೋಧವಾಗಿ ಆಯ್ಕೆಯಾದರು.
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಪಿಂಟು ಮತ್ತು ಬಿಜೆಪಿಯಿಂದ ಅಲಿಯಾಬಾದ್ ಕ್ಷೇತ್ರದ ಸದಸ್ಯ ಉತ್ತಮ ವೇಣು ನಾಯಕ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಉತ್ತಮ ನಾಯಕ ನಾಮಪತ್ರ ಹಿಂಪಡೆದ ಕಾರಣ ಪಿಂಟು ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 13 ಸದಸ್ಯರನ್ನು ಒಳಗೊಂಡಿರುವ ತಾಲ್ಲೂಕು ಪಂಚಾಯ್ತಿಯಲ್ಲಿ ಕಾಂಗ್ರೆಸ್ ಆರು, ಬಿಜೆಪಿ ಐದು, ಜೆಡಿಎಸ್ ಮತ್ತು ಪಕ್ಷೇತರ ತಲಾ ಒಂದು ಸದಸ್ಯ ಬಲ ಹೊಂದಿದ್ದು, ಯಾವೊಂದು ಪಕ್ಷವೂ ಬಹುಮತ ಹೊಂದಿರಲಿಲ್ಲ. ಚುನಾವಣೆಯಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಪಿಂಟು ಅವರಿಗೆ ಕಾಂಗ್ರೆಸ್ ಮುಖಂಡರು ಹೂಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಂಟು, ‘ನಾನು ಉಪಾಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಶಾಸಕ ಎಂ.ಬಿ.ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ರಾಜು ಅಲಗೂರ, ವಿಠಲ ಕಟಕದೊಂಡ, ಮುಖಂಡರಾದ ರಿಯಾಜ್ ಬಗಲಿ,ಡಿ.ಎಲ್.ಚವ್ಹಾಣ ಹಾಗೂ ಎಲ್ಲ ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ತಾಲ್ಲೂಕಿ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದರು.
ಹಾಲಿ ಅಧ್ಯಕ್ಷ ಕಾಳಪ್ಪ ಬಾಪೂರಾವ್ ಬೆಳ್ಳುಂಡಗಿ ಅವರು ಇನ್ನುಳಿದ ಅವಧಿಗೂ ಮುಂದುವರಿಯಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.