ತಾಂಬಾ (ವಿಜಯಪುರ):ವಿಜಯಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ, ನಾಗಠಾಣ ಶಾಸಕ ದೇವಾನಂದ ಚವ್ಹಾಣರ ಸಂಬಂಧಿ, ಆಪ್ತರ ಮನೆ ಮೇಲೆ ಶನಿವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ₹10.75 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.
ತಾಂಬಾ ಗ್ರಾಮದಲ್ಲಿನ ರಾಮಚಂದ್ರ ದೊಡಮನಿ, ದೇವಪ್ಪ ತದ್ದೇವಾಡಿ ಎಂಬುವರ ನಿವಾಸದಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ರಾಮಚಂದ್ರ ಮನೆಯಲ್ಲಿ ನಗದು ಸಿಕ್ಕಿಲ್ಲ. ದೇವಪ್ಪ ಮನೆಯಲ್ಲಿ ಹಣ ಸಿಕ್ಕಿದೆ ಎಂಬುದು ತಿಳಿದು ಬಂದಿದೆ.
ಎಂಟು ಅಧಿಕಾರಿಗಳ ತಂಡ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಶನಿವಾರ ಮಧ್ಯಾಹ್ನ ಎರಡು ಖಾಸಗಿ ವಾಹನಗಳಲ್ಲಿ ತಾಂಬಾ ಗ್ರಾಮಕ್ಕೆ ತೆರಳಿ ದಾಳಿ ನಡೆಸಿದೆ. ‘ದೇವಪ್ಪ ಮನೆಯಲ್ಲಿ ಇಲ್ಲ. ಆತ ಬರುವವರೆಗೂ ಮನೆಯಲ್ಲೇ ಇರುವುದಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ನೆರೆ ಹೊರೆಯವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರವಷ್ಟೇ ಜಿಲ್ಲೆಯ ವಿವಿಧೆಡೆ ಚುನಾವಣಾ ಪ್ರಚಾರ ನಡೆಸಿದ್ದರು. ಶನಿವಾರ ತಂದೆ–ಮಗ ಬೇರೆ ಜಿಲ್ಲೆಗಳಿಗೆ ಚುನಾವಣಾ ಪ್ರಚಾರ ನಡೆಸಲಿಕ್ಕಾಗಿ ವಿಜಯಪುರದಿಂದ ತೆರಳಿದ ಬೆನ್ನಿಗೆ ಐಟಿ ದಾಳಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೀಡಾಗುತ್ತಿದೆ.